ಹನೂರು: ತಮ್ಮ ಮನೆ ಬಳಿ ಹಲಸಿನ ಹಣ್ಣು ತಿನ್ನುತ್ತಿದ್ದ ಕಾಡಾನೆಯನ್ನು ಓಡಿಸಲು ಹೋದ ರೈತನ ಮೇಲೆ ಆನೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆಯು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ಸೋಮಾರ ನಡೆದಿದೆ.
ಮಧ್ಯಾಹ್ನ ಅಂಕಪ್ಪನವರ ಹೊಲಕ್ಕೆ ಬಂದ ಕಾಡಾನೆಯು ಹಲಸಿನ ಹಣ್ಣು ತಿನ್ನಲು ಯತ್ನಿಸಿದೆ. ಈ ವೇಳೆ ಅಂಕಪ್ಪ ಬೆದರಿಸಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ಆನೆ, ಅಂಕಪ್ಪರನ್ನು ಎತ್ತಿ ಬಿಸಾಡಿದೆ. ಪರಿಣಾಮ ಅವರ ಕೈ, ಕುತ್ತಿಗೆ ಮೂಳೆ ಮುರಿದಿದೆ. ತಕ್ಷಣ ರೈತನ ಕುಟುಂಬ ಅಂಕಪ್ಪರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಿ, ಮೈಸೂರಿಗೆ ವರ್ಗಾಯಿಸಿದೆ.