ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಆರಂಭ

KannadaprabhaNewsNetwork | Published : May 23, 2025 11:54 PM
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಆನೆ ಗಣತಿ ಸಮಯದಲ್ಲಿ ಗಣತಿದಾರರಿಗೆ ಕಾಡಾನೆ ಕಾಣಿಸಿಕೊಂಡಿದೆ.
Follow Us

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಶುಕ್ರವಾರದಿಂದ ಆರಂಭವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ೧೩ ವಲಯಗಳಲ್ಲಿ ಆನೆ ಗಣತಿ ನಡೆಸಲಾಯಿತು.ಮೇ೨೩ ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಯಲ್ಲಿ ಅರಣ್ಯ ಇಲಾಖೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ ೬ ರಿಂದಲೇ ಕಾಡಲ್ಲಿ ನಡೆದುಕೊಂಡು ನೇರವಾಗಿ ಕಾಣುವ ಆನೆಗಳ ಗಣತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದರು. ಮೇ೨೪ ರ ೨ ನೇ ದಿನ ೧೧೪ ಬೀಟ್‌ ಗಳಲ್ಲಿ ಟ್ರಾಂಜಾಕ್ಟ್‌ ಲೈನ್‌ನಲ್ಲಿ ನಡೆದುಕೊಂಡು ಎಡ, ಬಲ ಸಿಕ್ಕುವ ಲದ್ದಿ ನೋಡಿ ಆನೆಗಳು ಇರುವ ಬಗ್ಗೆ ಪರೋಕ್ಷವಾಗಿ ಗಣತಿ ಮಾಡಲಿದ್ದಾರೆ. ೩ ನೇ ದಿನ ಕಾಡಿನ ನೀರಿರುವ ಸ್ಥಳಗಳಲ್ಲಿ ಬಂದ ಆನೆಗಳು ಆನೆ ಗಂಡೋ, ಹೆಣ್ಣೋ ಹಾಗೂ ವಯಸ್ಸು ಹಾಗೂ ಮರಿಯಾನೆಗಳ ಬಗ್ಗೆ ಫಾರ್ಮೆಟ್‌ನಲ್ಲಿ ನಮೂದಿಸಲಿದ್ದಾರೆ ಎಂದರು.

ಪ್ರತಿ ಬೀಟ್‌ನಲ್ಲಿ ೩ ಜನ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ೧೧೪ ಬೀಟ್‌ಗಳಿದ್ದು, ಪ್ರತಿ ಬೀಟ್‌ನಲ್ಲಿ ೩ ಜನ ಇರಲಿದ್ದು, ಓರ್ವ ಗಾರ್ಡ್‌, ಓರ್ವ ವಾಚರ್‌, ಓರ್ವ ಬಂದೂಕುಧಾರಿ ಇರಲಿದ್ದು, ಈ ಮೂವರು ಕಡ್ಡಾಯ ಇರಲಿದ್ದಾರೆ ಎಂದು ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್ ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ೩೫೦ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆನೆ ಗಣತಿಯಲ್ಲಿ ಭಾಗವಹಿಸಲಿದ್ದು, ವಲಯ ಅರಣ್ಯಾಧಿಕಾರಿಗಳು, ಸಹಾಯಕ ಸಂರಕ್ಷಣಾಧಿಕಾರಿಗಳು ಹಾಗೂ ನಾನೂ ಕೂಡ ಆನೆ ಗಣತಿ ನಡೆಯುವ ಮೂರು ದಿನಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಆನೆಗಣತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರಂಭವಾಗಿದ್ದು, ಮೂರು ದಿನಗಳ ಕಾಲ ಬೆಳಗ್ಗೆ ೬ ರಿಂದ ಗಣತಿಯನ್ನು ಅರಣ್ಯ ಸಿಬ್ಬಂದಿ ನಡೆಸಲಿದ್ದಾರೆ. ಮೊದಲ ದಿನ ನೇರವಾಗಿ ಆನೆ ಗಣತಿ ಮಾಡಲಾಗಿದ್ದು, ೨ ನೇ ದಿನ ಟ್ರಾಂಜೆಕ್ಟ್‌ ಲೈನ್‌ನಲ್ಲಿ ಆನೆಗಳು ಹೋದ ಲದ್ದಿಗಳ ನೋಡುವುದು ಹಾಗೂ ಮೂರನೇ ದಿನ ನೀರಿರುವ ಸ್ಥಳದಲ್ಲಿ ಆನೆಗಳ ಗಣತಿ ಮಾಡಲಿದ್ದಾರೆ.

-ಎನ್.ಪಿ.ನವೀನ್ ಕುಮಾರ್, ಎಸಿಎಫ್‌, ಬಂಡೀಪುರ