ಕನ್ನಡಪ್ರಭ ವಾರ್ತೆ ಶೃಂಗೇರಿ
ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ನಡೆದ ‘ಭುಗಿಲು’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಅರಾಜಕತೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ತುರ್ತು ಪರಿಸ್ಥಿತಿ ಹೇರಬಹುದು. ಆದರೆ ಜನರ ಹಕ್ಕುಗಳನ್ನು, ಪತ್ರಿಕಾ ಸ್ವಾತಂತ್ರ್ಯ ದಮನಗೊಳಿಸಲು ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಅಂದಿನ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಅಗತ್ಯವೇ ಇರಲಿಲ್ಲ. ತುರ್ತು ಪರಿಸ್ಥಿತಿ ಹೆಸರಲ್ಲಿ ಹಕ್ಕುಗಳನ್ನು ಹತ್ತಿಕ್ಕಲಾಯಿತು. ದೇಶಕ್ಕೆ ಅದು ಒಂದು ಕಪ್ಪುಚುಕ್ಕೆ ಎಂದರು.
ಹರಿಹರಪುರ ಪ್ರಭೋದಿನಿ ಗುರುಕುಲ ವಿಶ್ವಸ್ಥ ಬಿ.ಕೆ.ಗಣೇಶ್ ರಾವ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇತಿಹಾಸದ ಅರಿವು ಯಾರಿಗೆ ಇರುತ್ತದೆಯೋ ಅವರು ಭವಿಷ್ಯ ರೂಪಿಸಬಲ್ಲರು. ದೀನ ದಲಿತರಿಗೆ, ದುರ್ಬಲರಿಗೆ ನಮ್ಮ ಹೃದಯ ಸದಾ ತೆರೆದಿರಬೇಕು. ಇದು ನಮ್ಮ ಧ್ಯೇಯ ಮಂತ್ರವಾಗಿರಬೇಕು. ತುರ್ತುಪರಿಸ್ಥಿಯ ಕರಾಳ ಘಟನೆ ಮತ್ತೆಂದು ನಮ್ಮ ಮುಂದೆ ಬಾರದಿರಲಿ ಎಂದರು.ಭುಗಿಲು ಪುಸ್ತಕದ ಕುರಿತು ಪತ್ರಕರ್ತ ದು.ಗು.ಲಕ್ಷಮಣ್ ಮಾತನಾಡಿ, ಈ ಪುಸ್ತಕವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಹೋರಾಟ ಮಾಡಿದವರ ಸಾರ್ಥಕ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಇಂದಿನ ಪೀಳಿಗೆಗೆ ತುರ್ತು ಪರಿಸ್ಥಿತಿಯ ಕರಾಳ ಘಟನೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಪುಸ್ತಕವನ್ನು ಮರುಮುದ್ರಣಗೊಳಿಸಿ ಹೊರತರಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ತಮ್ಮ ಹುದ್ದೆ ಭದ್ರ ಮಾಡಿಕೊಳ್ಳಲು ಹಾಗೂ ರಾಜಕೀಯ ವಿರೋಧಿಗಳನ್ನುದಮನ ಮಾಡುವ ಉದ್ದೇಶದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದರು ಎಂದರು.
ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ 19 ಜನ ಹೋರಾಟಗಾರರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕೆ.ಶ್ರೀಕಾಂತ್, ಎಂ.ಎನ್. ಲಕ್ಷಮಿನಾರಾಯಣ ಭಟ್ ಮತ್ತಿತರರು ಹಾಜರಿದ್ದರು.