ಕನ್ನಡಪ್ರಭ ವಾರ್ತೆ ಸುರಪುರ
ಸಿಎಂ ಮತ್ತು ಡಿಸಿಎಂ ನೀಡಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮಗಳ ಅಭಿವೃದ್ಧಿಗೆ ಒತ್ತು ನೀಡುವೆ. ರಾಜ್ಯದಲ್ಲಿರುವ ಉಗ್ರಾಣಗಳ ಸಮಸ್ಯೆ ಅರಿತು ಯೋಜನೆ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ, ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.ಬೆಂಗಳೂರಿನ ಫ್ರಿಂರೋಸ್ ರಸ್ತೆಯಲ್ಲಿರುವ ಉಗ್ರಾಣ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಂಪುಟ ದರ್ಜೆ ಸ್ಥಾನಮಾನ ನೀಡಿ ರಾಜ್ಯ ಮತ್ತು ರಾಷ್ಟ್ರ ನಾಯಕ ಜವಾಬ್ದಾರಿ ನೀಡಿದ್ದಾರೆ. ಇದನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಆಡಳಿತ ನಡೆಸುತ್ತೇನೆ ಎಂದರು.
ಇದು ಸುರಪುರ ಜನತೆಯ ಆಶೀರ್ವಾದದಿಂದಲೇ ಎಲ್ಲ ಅಧಿಕಾರ ದೊರೆಯುತ್ತದೆ. ನಾವು ಯಾವುದೇ ಹುದ್ದೆ ನಿರ್ವಹಿಸಿದರೂ ಸುರಪುರ ಮತಕ್ಷೇತ್ರದ ಜನತೆಗೆ ಸಲ್ಲಬೇಕು. ನಮ್ಮ ರಾಜ್ಯವು ಕೃಷಿಯಾಧರಿತವಾಗಿದ್ದು, ಸಲಕರಣೆಗಳು, ಗೊಬ್ಬರ ಸೇರಿ ಯಾವುದೇ ವಸ್ತು ಸಂರಕ್ಷಿಸಿ ರೈತರಿಗೆ ತಲುಪಿಸುತ್ತೇವೆ. ವೇರ್ಹೌಸ್ ನಿರ್ಮಿಸಿ ರೈತರಿಗೆ ನೆರವಾಗುವಂತ ಕ್ರಿಯಾಯೋಜನೆಗೆ ರೂಪುರೇಷೆ ತಯಾರಿಸುತ್ತ ಚಿತ್ತ ಹರಿಸಿದ್ದೇವೆ ಎಂದು ತಿಳಿಸಿದರು.ನಾನು ಎಂದು ಅಧಿಕಾರದ ಆಸೆಗೆ ಒಳಗಾದವನಲ್ಲ. ನಾಲ್ಕು ಬಾರಿ ಶಾಸಕನಾಗಿ ಅಯ್ಕೆಯಾಗಿದ್ದರೂ ಪಕ್ಷ ಕೊಟ್ಟಿರುವಂತ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಅದೇ ರೀತಿ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಪಕ್ಷಕ್ಕೂ ಮತ್ತು ಜನರಿಗೆ ಉಪಯೋಗವಾಗುವಂತೆ ಕೆಲಸ ಮಾಡಿ ತೋರಿಸುವೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಕರ್ನಾಟಕ ಸರಕಾರದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷಕುಮಾರ ನಾಯಕ, ವಿಠ್ಠಲ್ ಯಾದವ್, ಶಾಂತಗೌಡ ಚೆನ್ನಪಟ್ಟಣ, ಶಾಸಕರ ಅಪ್ತ ಕಾರ್ಯದರ್ಶಿ ಹನುಮಂತ ಮಕಾಶಿ, ನಿಗಮ ವ್ಯವಸ್ಥಾಪಕರು ಸೇರಿದಂತೆ ಇತರರಿದ್ದರು.