ಕನ್ನಡಪ್ರಭ ವಾರ್ತೆ ಕುಮಟಾ
ಕೇಂದ್ರ ಸರ್ಕಾರವು ವಿದ್ಯುತ್ ಸುಧಾರಣೆ ಕಾಯ್ದೆ-೨೦೨೬ ಅನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸಲು ಹೊರಟಿದೆ. ಈ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿ ದೇಶಾದ್ಯಂತ ಒಂದು ದಿನದ ಮುಷ್ಕರ ನಡೆದಿದೆ. ಅದರಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಅಖಿಲ ಭಾರತ ವಿದ್ಯುತ್ ಎಂಜಿನಿಯರ್ ಮತ್ತು ನೌಕರರ ಒಕ್ಕೂಟ ಹಾಗೂ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ, ಹೆಸ್ಕಾಂ ಕಚೇರಿ ಎದುರು ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು.
ವಿದ್ಯುತ್ ನೌಕರರ ಸಂಘದ ಅಧ್ಯಕ್ಷ ಬೀರಾ ಗೌಡ ಮಾತನಾಡಿ, ವಿದ್ಯುತ್ ಬಿಲ್ ೨೦೦೩ ಜಾರಿಗೊಂಡು ೨೩ ವರ್ಷವಾಗಿದೆ. ಈ ೨೩ ವರ್ಷಗಳಲ್ಲಿ ಅನೇಕ ಬಾರಿ ತಿದ್ದುಪಡಿ ತಂದು ಶೇ. ೬೦ರಷ್ಟು ವಿದ್ಯುತ್ ಉತ್ಪಾದನೆ ಖಾಸಗಿಯಾಗಿದೆ. ವಿದ್ಯುತ್ ವಿತರಣೆ, ಸರಬರಾಜು ಮಾಡಲು ಖಾಸಗಿ ವಿದ್ಯುತ್ ಕಂಪನಿಗಳಿಗೆ ಇರುವ ವಿದ್ಯುತ್ ಕಾಯಿದೆಗಳು ಅನುಕೂಲಕರವಾಗಿಲ್ಲ. ಹಾಗಾಗಿ ಕಳೆದ ೨೦೧೪ರಿಂದ ವಿದ್ಯುತ್ ಮಸೂದೆ ತಿದ್ದುಪಡಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಅಖಿಲ ಭಾರತ ವಿದ್ಯುತ್ ಸಂಘಗಳು, ವಿರೋಧ ಪಕ್ಷದ ನಾಯಕರು, ಕಿಶಾನ್ ಮೋರ್ಚಾ ನಾಯಕರು ಬಿಲ್ ಪಾಸ್ ಮಾಡಲು ಬಿಟ್ಟಿಲ್ಲ. ೨೦೦೩ರ ವಿದ್ಯುತ್ ಕಾಯ್ದೆಯ ಎಲ್ಲ ಸೆಕ್ಷನ್ಗಳು ಖಾಸಗಿ ಉತ್ಪಾದಕರಿಗೆ ಲಾಭವಾಗುವಂತೆ ಬದಲಾವಣೆ ಮಾಡಲಾಗಿದೆ. ಪ್ರೀಪೇಯ್ಡ ಸ್ಮಾರ್ಟ್ ಮೀಟರ್ ಇರಲಿದೆ. ಈಗಿರುವ ಟವರ್ಗಳು, ಲೈನ್ಸ್ಗಳನ್ನು ಬಳಸಿಕೊಂಡು ಖಾಸಗಿ ಉತ್ಪಾದಕರು ನೇರವಾಗಿ ಗ್ರಾಹಕರಿಗೆ ವಿದ್ಯುತ್ ನೀಡಬಹುದು. ರೈತರು ಮೊದಲು ಬಿಲ್ ಕಟ್ಟಿ ಆಮೇಲೆ ಸರ್ಕಾರದಿಂದ ಸಬ್ಸಿಡಿ ಪಡೆಯಬೇಕಾಗುತ್ತದೆ. ದರ ಏರಿಕೆ ಸಾಮಾನ್ಯವಾಗಬಹುದು. ನೌಕರರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ. ವಿದ್ಯುತ್ ಖಾಸಗಿಯವರ ಪಾಲಾಗುತ್ತದೆ. ಸರ್ಕಾರದ ನಿಯಂತ್ರಣ ತಪ್ಪಿಹೋದರೆ ಬಡವರಿಗೆ, ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ, ವಿದ್ಯುತ್ ಸುಧಾರಣೆ ಕಾಯ್ದೆ-೨೦೨೬ನ್ನು ಕೈಬಿಡುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಮೋಹನ ಮಡಿವಾಳ, ಮಹೇಶ ನಾಯ್ಕ, ಶೇಖರ ನಾಯ್ಕ, ನಾಗರಾಜ ಗೌಡ, ಯಮುನಾ ನಾಯ್ಕ, ಗೀತಾ ಗೌಡ, ಪುಷ್ಪ ಇನ್ನಿತರರಿದ್ದರು.