ಕನ್ನಡಿಗರಿಗೆ ಉದ್ಯೋಗ-16ರಿಂದ ಹೋರಾಟ: ಬೇಕ್ರಿ ರಮೇಶ

KannadaprabhaNewsNetwork | Published : Oct 6, 2024 1:18 AM

ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಅ. ೧೬ ಮತ್ತು ೧೭ರಂದು ಕನ್ನಡಿಗರಿಗೆ ಉದ್ಯೋಗ, ನಾಡು, ನುಡಿ, ನೆಲ, ಜಲ ಸರ್ಕಾರದ ಭಿಕ್ಷೆಯಲ್ಲ, ಕನ್ನಡಿಗರ ಜನ್ಮಸಿದ್ಧ ಹಕ್ಕು ಎಂಬ ಚಳವಳಿ ಆರಂಭಿಸಿ, ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಅ. ೨೧ ಮತ್ತು ೨೨ರಂದು ಸಿದ್ದಾಪುರದ ಭುವನಗಿರಿಯಲ್ಲಿ ಮುಕ್ತಾಯಗೊಳಿಸುತ್ತೇವೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ತಿಳಿಸಿದರು.

ಶಿರಸಿ: ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಅ. ೧೬ ಮತ್ತು ೧೭ರಂದು ಕನ್ನಡಿಗರಿಗೆ ಉದ್ಯೋಗ, ನಾಡು, ನುಡಿ, ನೆಲ, ಜಲ ಸರ್ಕಾರದ ಭಿಕ್ಷೆಯಲ್ಲ, ಕನ್ನಡಿಗರ ಜನ್ಮಸಿದ್ಧ ಹಕ್ಕು ಎಂಬ ಚಳವಳಿ ಆರಂಭಿಸಿ, ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಅ. ೨೧ ಮತ್ತು ೨೨ರಂದು ಸಿದ್ದಾಪುರದ ಭುವನಗಿರಿಯಲ್ಲಿ ಮುಕ್ತಾಯಗೊಳಿಸುತ್ತೇವೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಾಯಿದೆ ಜಾರಿಗೊಳಿಸದೇ, ಕೇವಲ ವಲಸಿಗರಿಗೆ ಅನುಕೂಲ ಮಾಡಲಾಗುತ್ತಿದ್ದು, 15 ವರ್ಷಗಳಲ್ಲಿ ವಲಸಿಗರ ಸಂಖ್ಯೆ 8 ಪಟ್ಟು ಹೆಚ್ಚಳವಾಗಿದೆ. ಡಾ. ಸರೋಜನಿ ಮಹಿಷಿ ಪರಿಷ್ಕೃತ 2017ರ ವರದಿ ಕಾಯ್ದೆಯಾಗಿ ತರುವಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಖಾಸಗಿ ಉದ್ಯಮಿಗಳ ಮುಷ್ಟಿಯಲ್ಲಿ ಸರ್ಕಾರಗಳು ಸಿಲುಕಿಕೊಂಡಿವೆ ಎಂದು ಆರೋಪಿಸಿದರು.

ಕದಂಬ ಮಯೂರ ವರ್ಮ, ಚಾಲುಕ್ಯ ಇಮ್ಮಡಿ ಪುಲಿಕೇಶಿ ಮತ್ಥಳಿ ಸ್ಥಾಪಿಸಲು ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಹರಿದು ಹಂಚಿ ಹೋಗಿದ್ದ ಕನ್ನಡಿಗರ ನಾಡನ್ನು ಒಂದುಗೂಡಿಸಿ ಪ್ರಥಮ ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ಮಯೂರ ವರ್ಮ ಪುತ್ಥಳಿಯನ್ನು ಬನವಾಸಿ, ಕಾರವಾರ, ಬೆಳಗಾವಿಯ ಸುವರ್ಣಸೌಧ, ಬೆಂಗಳೂರಿನ ವಿಧಾನ ಸೌಧದ ಮುಂದೆ ಸ್ಥಾಪಿಸಬೇಕು. 6ನೇ ಶತಮಾನದಲ್ಲಿ ಕನ್ನಡಿಗರ ಕೀರ್ತಿ ಪತಾಕೆಯನ್ನು ಭಾರತ, ಬೇರೆ ರಾಷ್ಟ್ರಗಳಿಗೆ ತಲುಪಿಸಿದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿಯನ್ನು ಬೆಂಗಳೂರು ವಿಧಾನಸೌಧ, ಬೆಳಗಾವಿಯ ಸುವರ್ಣ ಸೌಧ, ಜಿಲ್ಲಾ ಕೇಂದ್ರಗಳ ಮುಂದೆ ಸ್ಥಾಪಿಸಬೇಕು. ಬಾದಾಮಿಯಲ್ಲಿ ಜಗಜ್ಯೋತಿ ಬಸವಣ್ಣ, ಇಮ್ಮಡಿ ಪುಲಿಕೇಶಿ ಪುತ್ಥಳಿ ಅನಾವರಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕು. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂದಿನ ಬಜೆಟ್‌ನಲ್ಲಿ ₹300 ಕೋಟಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಬದುಕು ಕಿತ್ತುಕೊಳ್ಳುತ್ತಿರುವ ಹಿಂದಿ: ಕೇಂದ್ರ ಸರ್ಕಾರ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕ ಇತ್ಯಾದಿ ಕಾರ್ಯಕ್ರಮಗಳನ್ನು ಕನ್ನಡಿಗರ ತೆರಿಗೆ ಹಣದಿಂದಲೇ ಮಾಡಿ, ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಕಚೇರಿಗಳಲ್ಲಿ ಹಿಂದಿ ಭಾಷಿಕರನ್ನೇ ತುಂಬುತ್ತಿದೆ. ಹೀಗಾಗಿ ಕನ್ನಡಿಗರೇ ಹರಕು ಮುರುಕು ಹಿಂದಿಯಲ್ಲಿ ಮಾತನಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ತ್ರಿಭಾಷೆ ಸೂತ್ರ ಅವಶ್ಯವಿಲ್ಲ. ದ್ವಿಭಾಷೆ ಸೂತ್ರ ಬೇಕು. ಶಾಲೆ ಪಠ್ಯಕ್ರಮಗಳಲ್ಲಿ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು. ಎಚ್‌ಎಎಲ್‌ನಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗಿದ್ದು, ಇದೇ ಮೊದಲ ಬಾರಿಗೆ ಇಂಗ್ಲಿಷ್, ಹಿಂದಿಯಲ್ಲಿ ಪರೀಕ್ಷೆ ನಡೆಸಿ 166 ಜನರಲ್ಲಿ 150 ಹಿಂದಿ ಭಾಷಿಕರನ್ನು ನೇಮಕ ಮಾಡಿದೆ. ಈ ನೇಮಕ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ನಾಗರಾಜು ಅಕ್ಕಿಆಲೂರು, ತಾಲೂಕು ಸಂಚಾಲಕ ಗುತ್ಯಪ್ಪ ಮಾದರ್‌ ಬನವಾಸಿ ಇದ್ದರು.