ಸಿದ್ಧಾರ್ಥ ಕಾಲೇಜಿನ ವಾಣಿಜ್ಯ ವಿಭಾಗದಿಂದ ಪದವಿ ಪ್ರದಾನ ಸಮಾರಂಭ
ಪ್ರತಿಯೊಬ್ಬ ವಿದ್ಯಾರ್ಥಿಯೂ ಅತ್ಯುತ್ತಮ ಶಿಕ್ಷಣ ಕಲಿಕಾ ಪ್ರಕ್ರಿಯೆಯಿಂದ ಜೀವನವನ್ನು ಸದೃಢ ಹಾಗೂ ಸಬಲೀಕರಣಗೊಳಿಸಿಕೊಳ್ಳಲು ಜ್ಞಾನ ಅವಶ್ಯಕವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಡೀನ್ ಪ್ರೊ.ಬಿ. ಶೇಖರ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ವಾಣಿಜ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಮನುಷ್ಯನನ್ನು ಉತ್ತಮ ನಾಗರಿಕನನ್ನಾಗಿ ಹಾಗೂ ಯೋಗ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣವೇ ಇಲ್ಲದಿದ್ದರೆ ಬದುಕೇ ಶೂನ್ಯವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಹಾಗೂ ಆರ್ಥಿಕವಾಗಿ ಸಧೃಢಗೊಳ್ಳಲು ಶಿಕ್ಷಣ ಅತ್ಯಂತ ಅವಶ್ಯಕ ಸಾಧನವಾಗಿದೆ ಎಂದು ನುಡಿದರು.
ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುಲಾಧಿಪತಿಗಳ ಸಲಹೆಗಾರ ವಿವೇಕ್ ವೀರಯ್ಯ ಮಾತನಾಡಿ, ಶಿಕ್ಷಕರಿಗೆ ಬೋಧನೆ ಒಂದು ಹವ್ಯಾಸ ಮತ್ತು ಶಕ್ತಿಯುತ ಸಾಧನ. ಯಾವುದೇ ಜಾತಿ ,ಧರ್ಮ, ಉದ್ಯೋಗ ಸ್ಥಾನದ ಭೇದವಿಲ್ಲದೆ ಮನುಷ್ಯನನ್ನು ಗೌರವಿಸಬೇಕು. ಆಗ ಪದವಿಗೆ ಬೆಲೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ, ಪ್ರಾಧ್ಯಾಪಕ ಪ್ರೊ. ಹನುಮಂತರಾಯಪ್ಪ ,ಸೈಯದ್ ಬಾಬು, ವಿನಯ್ಕುಮಾರ್ ಎಂ. ಹಾಗೂ ವಿವಿಧ ವಿಭಾಗದ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.