ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಪಟ್ಟಣ ಹೊರ ವಲಯದಲ್ಲಿನ ಬಹುತೇಕ ಲೇಔಟ್ ಮದ್ಯಪ್ರಿಯರ ಹಾಟ್ಸ್ಪಾಟ್ಗಳಾಗಿ ಪರಿಣಮಿಸಿದ್ದರಿಂದ ಅಲ್ಲಿನ ನಿವಾಸಿಗಳು, ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯಗಳಾದ ಗಜೇಂದ್ರಗಡ, ಕೊಪ್ಪಳ ಹಾಗೂ ತಾವರಗೇರಾ ರಸ್ತೆ ಪಕ್ಕದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಲೇಔಟ್ಗಳಲ್ಲಿ ಪಾರ್ಟಿ ಮಾಡಿ ಬಿಸಾಕಿರುವ ಮದ್ಯದ ಬಾಟಲ ರಾರಾಜಿಸುತ್ತಿವೆ. ಎಲ್ಲೆಂದರಲ್ಲಿ ಬಿದ್ದಿರುವ ಚಿಪ್ಸ್, ಉಪ್ಪಿನಕಾಯಿ ಪ್ಯಾಕೆಟ್, ನೀರಿನ ಬಾಟಲಿ, ಕುಡಿದು ಬಿಸಾಕಿದ ನೀರಿನ ಪೌಚ್ಗಳು ಕಾಣ ಸಿಗುತ್ತದೆ.
ಕೆಲವರು ಜನ್ಮದಿನ ಆಚರಣೆ ಇಲ್ಲಿಯೇ ಮಾಡುತ್ತಾರೆ. ಕೆಲ ಲೇಔಟ್ಗಳಲ್ಲಿ ಒಂದೆರಡು ಮನೆಗಳು ನಿರ್ಮಾಣವಾಗಿದ್ದು, ಇಂತಹ ವಾತಾವರಣದಿಂದ ಅಲ್ಲಿನ ನಿವಾಸಿಗಳು ಮುಜುಗರಪಟ್ಟುಕೊಳ್ಳುವಂತಾಗಿದೆ.ನಿತ್ಯ ಬೆಳಗ್ಗೆ ಜನರು ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಲೇಔಟ್ನಲ್ಲಿ ಕುಡಿದು ಬಿಸಾಕಿರುವ ಮದ್ಯ ಬಾಟಲಿಗಳು ಕಂಡು ಜನರು ಸ್ಥಳೀಯ ಆಡಳಿತದ ವಿರುದ್ಧ ಶಾಪ ಹಾಕುತ್ತಿದ್ದಾರೆ.
ನಸುಕಿನ ಜಾವ ವಾಯು ವಿಹಾರಕ್ಕೆ ಬರುವ ಕೆಲವರ ಪಾದಗಳಿಗೆ ಗಾಜಿನ ಚೂರುಗಳು ನೆಟ್ಟಿರುವ ಉದಾಹರಣೆಗಳಿವೆ. ಇನ್ನೂ ಕೆಲವೆಡೆ ಇಂತಹ ಪರಿಸ್ಥಿತಿಯಿಂದ ಜನ ಅತ್ತ ಕಡೆ ಸುಳಿಯುವುದನ್ನೇ ಬಿಟ್ಟಿದ್ದು, ಅಂತಹ ಜಾಗದಲ್ಲಿ ಈಗ ಮುಳ್ಳುಕಂಟಿ ಬೆಳೆದು ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.ಲಕ್ಷಾಂತರ ಖರ್ಚು ಮಾಡಿ ನಿರ್ಮಿಸಿದ ಇಂತಹ ಜಾಗ ನಿರ್ವಹಣೆ ಕೊರತೆಯಿಂದ ಈ ರೀತಿ ಆಗುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಲೇಔಟ್ ಮಾಲೀಕರು ಸಂಜೆ ವೇಳೆಯಲ್ಲಿ ನಡೆಯುವ ಇಂತಹ ಚಟುವಟಿಕೆಗೆ ಬ್ರೇಕ್ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಪಟ್ಟಣದಲ್ಲಿ ವಾಯುವಿಹಾರಕ್ಕಾಗಿ ಮತ್ತೊಂದು ಸುವ್ಯವಸ್ಥಿತ ಉದ್ಯಾನ ನಿರ್ಮಾಣ ಅಗತ್ಯವಾಗಿದೆ. ಈಗಿರುವ ಉದ್ಯಾನದಲ್ಲಿ ಸೂಕ್ತ ಸೌಲಭ್ಯದ ಕೊರತೆ ಕಾಡುತ್ತಿದೆ. ಹೀಗಾಗಿ ಪಟ್ಟಣದ ಜನರು ವಾಯುವಿಹಾರಕ್ಕಾಗಿ ಲೇಔಟ್ಗಳನ್ನು ಆಶ್ರಯಿಸುವಂತಾಗಿದೆ.ಕುಷ್ಟಗಿಯ ಹೊರವಲಯದಲ್ಲಿನ ಲೇಔಟ್ ರಾತ್ರಿಯ ಸಮಯದಲ್ಲಿ ಮದ್ಯವ್ಯಸನಿಗಳಿಗೆ ಹಾಗೂ ಪಾರ್ಟಿ ಮಾಡುವಂತವರಿಗೆ ಬಹಳಷ್ಟು ಅನುಕೂಲವಾಗಿವೆ. ಪುರಸಭೆ ಅಧಿಕಾರಿ ಮತ್ತು ಲೇಔಟ್ ಮಾಲೀಕರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಕುಷ್ಟಗಿ ಪಟ್ಟಣದ ನಿವಾಸಿ ಎಚ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.