ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನ, ಸೋಮೇಶ್ವರ ಭಕ್ತರ ಸೇವಾ ಸಮಿತಿ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿಂದೂಸ್ತಾನಿ ಸಂಗೀತ ಕಲಾವಿದ ಮನೋಹರ ಪಟವರ್ಧನ್ ಅವರಿಂದ ಸಂಗೀತ ಕಚೇರಿ ಆರಂಭಗೊಂಡಿತು.
ಮನೋಹರ ಪಟವರ್ಧನ್ ಅವರು ರಾಗ ಯೆಮೆನ್ ಕಲ್ಯಾಣದಲ್ಲಿ ಗಣೇಶನ ಸ್ತುತಿಯನ್ನು ಮಾಡುವ ಮೂಲಕ ಕಚೇರಿ ಆರಂಭಿಸಿದರು.
ಯೆಮೆನ್ ಕಲ್ಯಾಣದಲ್ಲಿ ದರುಶನ ದೇವೋ ಶಂಕರ ಮಹಾದೇವ ಎನ್ನುವ ಆಲಾಪನೆ ಮಾಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು."ತಾನೋಂ ತರದಿನಂ ತೋಂ " ಎನ್ನುವ ಆಲಾಪನೆಗೆ ಜನರು ಮೆಚ್ಚುಗೆ ಸೂಚಿಸಿದರು.
ರಾಗ ಮಾರು ಬಿಹಾದ್ ನಲ್ಲಿ "ಶಿವ ದರುಶನ ನಮಗಾಯಿತು "ಎನ್ನುವ ಪುರಂದರ ದಾಸರ ಹಾಡನ್ನು ಅದ್ಭುತವಾಗಿ ಪ್ರಸ್ತುತಪಡಿಸುವ ಮೂಲಕ ಸಂಜೆ ಸಂಗೀತ ಕಚೇರಿಯಲ್ಲಿ ರಂಗು ಮೂಡಿಸಿದರು.
ಹಾರ್ಮೋನಿಯಂ ಸಾಥ್ ತೇಜಸ್ ಕಾಟೋಟಿ, ಸುಮೀತ ನಾಯಕ ತಬಲಾ ಸಾಥ್ ನೀಡಿದರು.