ತುಮಕೂರು: ಮಕ್ಕಳಿಗೆ ವಿದ್ಯೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ನಗರದ ಕೆ.ಪಿ.ಎಸ್ ಎಂಪ್ರೆಸ್ ಬಾಲಕಿಯರ ಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜಯಂತಿ, ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಶ್ರೇಷ್ಠ ಶಿಕ್ಷಕರೆನಿಸಿಕೊಂಡ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಎಲ್ಲಾ ಶಿಕ್ಷಕರು ಸಹ ಅವರಂತೆ ಮಕ್ಕಳೊಂದಿಗೆ ಒಡನಾಟ ಬೆಳೆಸಿಕೊಂಡು ಪ್ರೀತಿಯಿಂದ ಅವರ ತಪ್ಪುಗಳನ್ನು ತಿದ್ದುವ ಮೂಲಕ ಸರಿ ದಾರಿಯನ್ನು ತೋರಬೇಕು. ತನ್ನ ತಾಯಿಯು ಸಹ ಶಿಕ್ಷಕಿ ಆಗಿದ್ದು, ಅವರಿಂದ ಅನೇಕ ಜೀವನ ಮೌಲ್ಯಗಳನ್ನು ಕಲಿತಿದ್ದೇನೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಶಿಕ್ಷಕರು ದೇಶದ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ-ತಾಯಿಯ ನಂತರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುವ ಶಕ್ತಿ ಶಿಕ್ಷಕರಿಗೆ ಮಾತ್ರ ಸಾಧ್ಯ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ತಮ್ಮ ವ್ಯಕ್ತಿತ್ವ ಮತ್ತು ಆದರ್ಶಗಳ ಮೂಲಕ ಜೀವನಪರ್ಯಂತ ನೆನಪಿನಲ್ಲುಳಿಯುತ್ತಾರೆ ಎಂದು ತಿಳಿಸಿದರು.
ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳಿಗೆ ಶಿಕ್ಷಕರು ಒಗ್ಗಿಕೊಂಡು ವಿದ್ಯಾರ್ಥಿಗಳಿಗೆ ಹೊಸ ವಿಷಯಗಳನ್ನು ಕಲಿಸಬೇಕು ಎಂದು ತಿಳಿಸಿದರು.ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಿಕ್ಷಕರು ಆತ್ಮ ವಿಶ್ವಾಸ, ವಿನಯ ಶೀಲತೆ, ಸಂಸ್ಕಾರ ಮತ್ತು ಪ್ರಾಮಾಣಿಕತೆಯನ್ನು ಕಲಿಸುವ ಮೂಲಕ ಮಕ್ಕಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕು. ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಕಲಿಸಬೇಕು. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಯಶಸ್ಸು ಇದ್ದೇ ಇರುತ್ತದೆ. ಶಿಕ್ಷಕರಿಗೆ ಪಠ್ಯ ಬೋಧನೆಯೊಂದಿಗೆ ಆಡಳಿತಾತ್ಮಕ ಕೆಲಸಗಳು ಹೆಚ್ಚಾಗುತ್ತಿದ್ದು, ಸರ್ಕಾರಗಳು ಈ ಬಗ್ಗೆ ಗಮನ ವಹಿಸಿ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂದು ತಿಳಿಸಿದರು.ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗಣ್ಯರಿಂದ ಸನ್ಮಾನಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ ಡಯಟ್(ಅಭಿವೃದ್ಧಿ) ಉಪನಿರ್ದೇಶಕ ಕೆ. ಮಂಜುನಾಥ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ. ಮನಮೋಹನ್ ಉಪಸ್ಥಿತರಿದ್ದರು.2025ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಹೆಸರು ತರುವಲ್ಲಿ ಎಲ್ಲಾ ಶಿಕ್ಷಕರು ಸಹ ನಿರಂತರವಾಗಿ ಶ್ರಮಿಸಬೇಕು.
- ಶುಭ ಕಲ್ಯಾಣ್ ಜಿಲ್ಲಾಧಿಕಾರಿಅತ್ಯಂತ ಹೆಚ್ಚು ಸರ್ಕಾರಿ ನೌಕರರನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಸದೃಢ ಮಾನವ ಸಂಪನ್ಮೂಲ ಸೃಜನೆ ಮಾಡಲಾಗುತ್ತಿದೆ.
ಜಿ. ಪ್ರಭು ಜಿಪಂ ಸಿಇಒಯಾರ್ಯಾರಿಗೆ ಸಿಕ್ಕಿದೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕ ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೋಣ ಶಾಲೆಯ ಸಿ.ಎಸ್.ಕೆಂಚಮ್ಮ, ಗುಬ್ಬಿ ತಾಲೂಕಿನ ಮಲ್ಲಪ್ಪನಹಳ್ಳಿ ಶಾಲೆಯ ವೆಂಕಟೇಶಯ್ಯ, ಕುಣಿಗಲ್ ತಾಲೂಕಿನ ತುರುಗನೂರು ಶಾಲೆಯ ವಿ.ರಮೇಶ್, ತಿಪಟೂರು ತಾಲೂಕಿನ ಹರಿಸಮುದ್ರ ಶಾಲೆಯ ಎಚ್.ಎಂ.ವಸಂತಕುಮಾರ್, ತುರುವೇಕೆರೆ ತಾಲೂಕಿನ ಸೂಳೆಕೆರೆ ಶಾಲೆಯ ಎಂ.ಬಿ. ಲೇಪಾಕ್ಷಮೂರ್ತಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಹಳ್ಳಿಕಾರ ಬೀದಿ ಶಾಲೆಯ ಸಿ.ಎ.ಸುರೇಶ್, ಗುಬ್ಬಿ ತಾಲೂಕಿನ ಕೊಂಡ್ಲಿ ಶಾಲೆಯ ಎಚ್.ಸೌಭಾಗ್ಯ, ಕುಣಿಗಲ್ ತಾಲೂಕಿನ ಮಾದುಗೋನಹಳ್ಳಿ ಶಾಲೆಯ ಎನ್.ಜಯಲಕ್ಷ್ಮ್ಮ, ತಿಪಟೂರು ತಾಲೂಕಿನ ನಾಗತಿಹಳ್ಳಿ ಶಾಲೆಯ ವಿ.ಎಂ. ಗಿರಿಜಮ್ಮ, ತುಮಕೂರು ತಾಲೂಕಿನ ಶ್ರೀರಾಮನಗರ ಶಾಲೆಯ ಟಿ.ಎಂ.ರಂಗನಾಥಯ್ಯ, ತುರುವೇಕೆರೆ ತಾಲೂಕಿನ ಬಿಗನೇನಹಳ್ಳಿ ಶಾಲೆಯ ಎಂ.ಬಿ.ಚೇತನ, ಪ್ರೌಢ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿ ಕೆರೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್.ಕೆ.ದಯಾಶಂಕರ, ಗುಬ್ಬಿ ತಾಲೂಕಿನ ಮಂಚಲದೊರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಎನ್.ವಿಜಯಕುಮಾರಿ, ಕುಣಿಗಲ್ ತಾಲೂಕಿನ ಎಡೆಯೂರಿನ ಶ್ರೀ ಗೌತಮ ಅನುದಾನಿತ ಪ್ರೌಢಶಾಲೆಯ ಬಿ.ಆರ್.ಹರೀಶ್, ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎನ್. ಮೂರ್ತಿ, ತುಮಕೂರು ತಾಲೂಕಿನ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಸಿದ್ಧಲಿಂಗೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಟಿ.ಎಸ್. ರವಿಶಂಕರ್, ತುರುವೇಕೆರೆ ತಾಲೂಕಿನ ಸಂಪಿಗೆಯ ಚಂಪಕ ಪ್ರೌಢಶಾಲೆಯ ಬಿ.ಎನ್.ಆಶಾಲತ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.