ಕನ್ನಡಪ್ರಭ ವಾರ್ತೆ ವಿಜಯಪುರ
ಐಶ್ವರ್ಯ ನಗರದ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಮಸಾಲಿ ವಕೀಲರ ಸಭೆಯಲ್ಲಿ ಶ್ರೀಗಳು ಮಾತನಾಡಿದರು. ವಿವಿಧ ರೀತಿಯ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡಬೇಕು ಎನ್ನುವ 6 ಹಂತದ ಹೋರಾಟಗಳು ಮುಗಿದಿವೆ. 7ನೆ ಹಂತದ ಹೋರಾಟ ವಕೀಲರ ಮುಂದಾಳತ್ವದಲ್ಲಿ ಕಾನೂನಿನ ಬಲ ತುಂಬಲು ನೇತೃತ್ವ ವಹಿಸಲಾಗಿದೆ. ಯಾವುದೇ ಪಕ್ಷದ ಸಮುದಾಯದ ಶಾಸಕರು, ನಿರೀಕ್ಷಿತ ಮಟ್ಟದಲ್ಲಿ ೨ಎ ಮೀಸಲಾತಿಗಾಗಿ ಹೋರಾಟ ಮಾಡದ ಹಿನ್ನೆಲೆಯಲ್ಲಿ ಬೇಸರವಾಗಿದೆ. ಈಗ ತಮ್ಮ ಸಮುದಾಯದ ವಕೀಲರ ಮೂಲಕ ಹೋರಾಟ ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದರು.
ಇನ್ನು ಮುಂದೆ ಕಾನೂನಿನ ಮೂಲಕ ವಕೀಲರ ಮುಖಾಂತರ ನ್ಯಾಯಾಂಗ ಹೋರಾಟ ಕೈಗೊಳ್ಳಲಾಗುವುದು. ಅಲ್ಲದೇ ಕಳೆದ ಅಧಿವೇಶನದಲ್ಲಿ ಸಮುದಾಯದ ಶಾಸಕರು, ಮೀಸಲಾತಿಗಾಗಿ ಹೋರಾಟ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅಧಿವೇಶನದಲ್ಲಿ ಯಾವ ಶಾಸಕರು, ಇಚ್ಛಾಶಕ್ತಿ ತೋರದ ಹಿನ್ನೆಲೆಯಲ್ಲಿ ಸದನದಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ. ಕಾರಣ ವಕೀಲರ ಮುಖಾಂತರ ಸಭೆ ನಡೆಸಿ ಕಾನೂನು ಮೂಲಕ ಮುಖ್ಯಮಂತ್ರಿಗಳ ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದರು.ಈ ಹಿಂದೆ ಎಲ್ಲ ಸಚಿವರು, ಶಾಸಕರು ಇಚ್ಛಾಶಕ್ತಿ ತೋರದ ಕಾರಣ ಹಿಂದಿನ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿ ಕೈ ತೊಳೆದುಕೊಂಡಿತ್ತು. ಅದು ನ್ಯಾಯಾಂಗದ ಅಂಗಳದಲ್ಲಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಈಗ ವಕೀಲರ ಮೂಲಕ ತಜ್ಞರ ವಕೀಲರ ಸಮಿತಿ ರಚಿಸಿ ನ್ಯಾಯಾಂಗದ ಮೂಲಕ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆಯುವ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯಮಟ್ಟದಲ್ಲಿ ವಕೀಲರ ಪರಿಷತ್, ಶೀಘ್ರದಲ್ಲಿಯೇ ರಚನೆಯಾಗಲಿದೆ ಎಂದರು.
ಶ್ರೀಶೈಲ ಮುಳಜಿ ಸ್ವಾಗತಿಸಿದರು. ಭುವನೇಶ್ವರಿ ಅಲಗೊಂಡ ನಿರೂಪಿಸಿದರು. ಸಿದ್ದನಗೌಡ ಪೊಲೀಸ್ ಪಾಟೀಲ ವಂದಿಸಿದರು.