ಪುತ್ತೂರು: ದೇಶದ ಸ್ವಾತಂತ್ರ್ಯವು ಉಚಿತವಾಗಿ ದೊರೆತ ಕೊಡುಗೆಯಲ್ಲ. ಹಿರಿಯರ ತ್ಯಾಗ ಬಲಿದಾನಗಳಿಗೆ ದೊರಕಿದ ಫಲವಾಗಿದೆ. ಅಂತಹ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಹೇಳಿದರು. ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪುತ್ತೂರಿನ ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಾರ್ವಜನಿಕ ಸಂದೇಶ ನೀಡಿದರು. ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧರ್ಮ ಆಧಾರಿತವಾದ ಜನಪ್ರತಿನಿಧಿಗಳ ಆಯ್ಕೆ ಮಾಡುವ ಬದಲು ಅಭಿವೃದ್ಧಿ ಆಧಾರಿತವಾಗಿ ಈ ಆಯ್ಕೆಗಳು ನಡೆಯ ಬೇಕಾಗಿದೆ ಎಂದರು. ಸನ್ಮಾನ: ನಿವೃತ್ತ ಸೈನಿಕರಾದ ದಿವಾಕರ ಬೊಳಿಕ್ಕಳ, ರಮೇಶ್ ರೈ ಬೋಳೋಡಿ, ಸೈನಿಕರ ಪತ್ನಿಯರಾದ ದಿ. ಮುತ್ತಪ್ಪ ಮೂಲ್ಯ ಅವರ ಪತ್ನಿ ಸ್ವರ್ಣಲತಾ ಮತ್ತು ದಿ. ನರಸಿಂಹ ಭಟ್ ಅವರ ಪತ್ನಿ ಜಯಶ್ರೀ ಭಟ್ ಅವರನ್ನು ಗೌರವಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅನನ್ಯ, ದ್ವಿತೀಯ ಸ್ಥಾನ ಪಡೆದ ಆದ್ಯ ಮತ್ತು ಸಾನ್ವಿ ಎಸ್ ಪ್ರಭು ಅವರನ್ನು ಪುರಸ್ಕರಿಸಲಾಯಿತು. ಜಲಜಾಗೃತಿ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಿಖಿತಾ ಕೆ, ದ್ವಿತೀಯ ಸ್ಥಾನ ಪಡೆದ ಚಿಂತನಾ ಮತ್ತು ತೃತೀಯ ಸ್ಥಾನ ಪಡೆದ ಫಾತಿಮ ಅಫ್ರಾ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.

ಡಿವೈಎಸ್‌ಪಿ ಪ್ರಮೋದ್ ಕುಮಾರ್, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ ಉಪಸ್ಥಿತರಿದ್ದರು. ತಹಸೀಲ್ದಾರ್ ಬಿ.ಎಸ್. ಕೂಡಲಗಿ ಸ್ವಾಗತಿಸಿದರು. ಸಾಮಸ್ಕೃತಿಕ ಸಮಿತಿ ಸಂಚಾಲಕರಾದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.