ಹುಬ್ಬಳ್ಳಿ:
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕನಕ ನೌಕರ ಬಳಗದಿಂದ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳು ದೇವರಿದ್ದಂತೆ. ಅವರನ್ನು ದೇವರಂತೆ ಕಾಣಬೇಕು. ಮಕ್ಕಳಿಗೆ ಆಚಾರ, ವಿಚಾರ ಮತ್ತು ಉತ್ತಮ ಪದ್ಧತಿ ಕಲಿಸಬೇಕು. ಮಕ್ಕಳ ಮುಂದೆ ಪಾಲಕರು ಜಗಳ ಮಾಡಬಾರದು. ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾಧಕರನ್ನು ಪುರಸ್ಕರಿಸುವುದರಿಂದ ಅವರು ಇನ್ನೂ ದೊಡ್ಡ ಸಾಧನೆ ಮಾಡಲು ಸ್ಫೂರ್ತಿ ದೊರೆಯುತ್ತದೆ. ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಸಮಯದ ಮೌಲ್ಯ, ಕಠಿಣ ಪರಿಶ್ರಮ ಹಾಗೂ ದಣಿವರಿಯದ ದುಡಿಮೆಯ ಅಗತ್ಯವಿದೆ. ದುಡಿಮೆಯಲ್ಲಿ ದೇವರನ್ನು ಕಾಣಬೇಕು. ಆಗ ಮಾತ್ರ ಆ ವ್ಯಕ್ತಿಗೆ ಎಂದೆಂದಿಗೂ ಸೋಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಣ್ಣ ಕನಸು ಕಾಣದೆ ದೊಡ್ಡ ಕನಸು ಕಾಣಬೇಕು. ಹಠ ಹಾಗೂ ಛಲದಿಂದ ಸಾಧನೆ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ, ಮಾಜಿ ಯೋಧ ಪರಶುರಾಮ ದಿವಾನದ, ಎಚ್.ಕೆ. ರಮೇಶ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ್, ಪಾಲಿಕೆ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಬಿಇಒ ಎಚ್.ಎಂ. ಫಡ್ನಿಸ್, ಅಶೋಕ ಒಡೆಯರ್, ಪಿ.ಆರ್. ಕಿರಣಗಿ, ದೇವೇಂದ್ರ ಸಿಂಧೋಗಿ, ಸಂತೋಷಕುಮಾರ ಯರಂಗಲೆ, ಸೇರಿ ಹಲವರಿದ್ದರು. ಪ್ರಕಾಶ ಕಂಬಳಿ ಪ್ರಾರ್ಥಿಸಿದರು. ತೇಜಾವತಿ ಎಚ್.ಡಿ. ಹಾಗೂ ಲಕ್ಷ್ಮೀ ಧನ್ನಕನವರ ನಿರೂಪಿಸಿದರು. ಎಂ.ಎಚ್. ಜಂಗಲಿ ಸ್ವಾಗತಿಸಿದರು.