ಹಳಿಯಾಳ: ವಸತಿ ಬಡಾವಣೆಯ ಸರ್ವಿಸ್ ರಸ್ತೆಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಿದ ಅಂಗಡಿಗಳನ್ನು ತೆರವು ಮಾಡುವ ಕಾರ್ಯಾಚರಣೆಯು ಪುರಸಭೆಯಿಂದ ಬುಧವಾರ ಸಂಜೆ ನಡೆಯಿತು.
ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಆಗಮಿಸಿ ತೆರವು ಕಾರ್ಯಾಚರಣೆಗೆ ಮುಂದಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮಾಲೀಕರು ಹಾಗೂ ಅಲ್ಲಿನ ಅಂಗಡಿ ವರ್ತಕರ ಮಧ್ಯೆ ವಾಗ್ವಾದ ನಡೆಯಿತು. ಉದ್ದೇಶಪೂರ್ವಕವಾಗಿ ನಮ್ಮನ್ನೇ ಗುರಿ ಮಾಡಲಾಗಿದೆ. ಪಟ್ಟಣದಲ್ಲಿ ಸಾಕಷ್ಟು ಅತಿಕ್ರಮಣದ ಪ್ರಕರಣಗಳಿದ್ದರೂ ನಮ್ಮ ಮೇಲೆಯೇ ಬ್ರಹ್ಮಾಸ್ತ್ರ ಏಕೆ ಎಂದು ಪ್ರಶ್ನಿಸಿದರು. ಕಳೆದ ವರ್ಷದ ಜೂನ್ ತಿಂಗಳಿನಿಂದ ನಮ್ಮನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸಂಜೆಯವರೆಗೆ ಕಾಲಾವಕಾಶ: ಬಡಾವಣೆ ಮಾಲೀಕರ ಹಾಗೂ ಅಂಗಡಿ ವರ್ತಕರ ಅಹವಾಲು ಆಲಿಸಿದ ಮುಖ್ಯಾಧಿಕಾರಿ ಅಶೋಕ ಸಾಳೆನ್ನನವರ ಅವರು, ಬಡಾವಣೆಯಲ್ಲಿನ ನೀಲನಕ್ಷೆಯಲ್ಲಿ ತೋರಿಸಿದರು. ಅಲ್ಲದೇ ಸರ್ಕಾರಿ ಸರ್ವಿಸ್ ರಸ್ತೆಯನ್ನು ಅತಿಕ್ರಮಿಸುವುದು ಸರಿಯಲ್ಲ ಎಂದರು.ಮುಖ್ಯಾಧಿಕಾರಿಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ ಅಂಗಡಿ ಹಾಗೂ ಗ್ಯಾರೇಜ್ ಮಾಲೀಕರು ಸ್ವತಃ ತೆರವುಗೊಳಿಸಲು ಗುರುವಾರ ಸಂಜೆಯವರೆಗೆ ಅವಕಾಶ ಕಲ್ಪಿಸಬೇಕೆಂದು ಪುರಸಭೆಗೆ ಲಿಖಿತವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪುರಸಭೆಯವರು ತೆರವು ಕಾರ್ಯಾಚರಣೆಯನ್ನು ಒಂದು ದಿನ ಮೂಂದೂಡಿದ್ದಾರೆ.