ಭಟ್ಕಳದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ಚಾಲನೆ
ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ತಹಸೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಚಾಲನೆ ನೀಡಿದರು.
ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಮೂರು ತಲೆಮಾರಿನ ಗರಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಇಂತಹ ಪ್ರಕ್ರಿಯೆ ಕಾನೂನಿಗೆ ವ್ಯತಿರಿಕ್ತವಾಗಿದೆ. ಸೆಪ್ಟೆಂಬರ್ ೨೦೧೨ರಲ್ಲಿಯೇ ಗರಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಕಾಯ್ದೆ ತಿದ್ದಪಡಿಯಾಗಿದ್ದು, ಇದಕ್ಕೆ ಪೂರಕವಾಗಿ ಗುಜಾರತ್ ಹೈಕೋರ್ಟ್ ಸಹಿತ ದಾಖಲೆಯ ಸಾಕ್ಷ್ಯ ಒತ್ತಾಯಿಸಲು ಅವಕಾಶವಿಲ್ಲವೆಂದು ಉಲ್ಲೇಖಿಸಿದೆ. ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಆದೇಶದಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ದಾಖಲೆಗಳಿಗೆ ಆಗ್ರಹಿಸಿ ಅರ್ಜಿ ತಿರಸ್ಕರಿಸುವುದು ಸಮಂಜಸವಲ್ಲ ಎಂದು ತಿಳಿಸಿದೆ. ಅಲ್ಲದೇ, ಮೂರು ತಲೆಮಾರಿನ ಸಾಗುವಳಿ ಕ್ಷೇತ್ರದಲ್ಲಿನ ಜನವಸತಿ ಪ್ರದೇಶವೆಂದು ಪುಷ್ಠೀಕರಿಸುವುದು ಅವಶ್ಯವೆಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲಿಸಲಾಗಿರುವುದರಿಂದ ರಾಜ್ಯದಲ್ಲಿ ಶೇ.೮೮.೯೦ ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ ಶೇ ೮೩.೫೦ರಷ್ಟು ಅರ್ಜಿ ತಿರಸ್ಕರಿಸ್ಪಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಅರಣ್ಯವಾಸಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ ಇನ್ನಾದರೂ ಅರಣ್ಯವಾಸಿಗಳ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಸಂಚಾಲಕ ದೇವರಾಜ ಗೊಂಡ ವಂದಿಸಿದರು. ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಪೀಕ್, ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಳೆ,ರತ್ನ ನಾಯ್ಕ ರಾಘವೇಂದ್ರ ಮರಾಠಿ, ವಿಮಲಾ ಮೋಗೇರ, ಕವಿತಾ ಮಂಜುನಾಥ ಗೊಂಡ ನಾಗಮ್ಮ ಮೋಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೋಯೈದ್ದೀನ್, ನತ್ತಾರ, ಜಮಾವೀರ್ ಜಾಬೀರ್, ಶ್ರೀಧರ ನಾಯ್ಕ ಸೇರಿ ನೂರಾರು ಅರಣ್ಯವಾಸಿಗಳು ಇದ್ದರು.