ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಕವಿಗಳು ಪ್ರಚಲಿತ ಸಮಸ್ಯೆ ಬಿಂಬಿಸುವ ಕವಿತೆ ರಚನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಹಿರಿಯ ಸಾಹಿತಿ ಕೊಟ್ರೇಶ್.ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.
ಕವನ ರಚಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಅದು ಹೃದಯಾಂತರಾಳದಿಂದ ಬರುವ ಕೌಶಲ್ಯ. ಬರೆದ ಕವಿತೆಗಳನ್ನು ಸ್ಪಷ್ಟವಾಗಿ ವಾಚಿಸುವುದು ಉತ್ತಮ. ಹೊಸ ಹೊಸ ಪದಗಳ ಪ್ರಯೋಗ, ಪ್ರಾಸ ಬದ್ಧವಾಗಿ ಕಡಿಮೆ ಸಾಲುಗಳಿಂದ ಹೆಚ್ಚು ಅರ್ಥಗರ್ಭಿತವಾದ ಕವಿತೆಯನ್ನು ಬರೆಯಬೇಕು ಎಂದರು.
ಉತ್ತಮ ಕವಿಯಾಗಬೇಕಾದರೆ ಆಗಾಗ್ಗೆ ಕಾವ್ಯ-ಕಮ್ಮಟ ಕಾರ್ಯಕ್ರಮಗಳಿಗೆ ಹೋಗಿ ಕಲಿಯಬೇಕು. ಜೊತೆಗೆ ಮೇರು ಸಾಹಿತಿಗಳ ಕೃತಿಗಳನ್ನು ಓದಬೇಕು. ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ ಕವನಗಳನ್ನು ಎರವಲು ಮಾಡಿ ಕವಿಗೋಷ್ಠಿಗಳಲ್ಲಿ ವಾಚನ ಮಾಡಬಾರದು ಎಂದರು.ಕವನ ಚಿಕ್ಕದಿರಲಿ, ದೊಡ್ಡದಿರಲಿ ನಿಮ್ಮ ಸ್ವರಚಿತ ಕವನಗಳನ್ನು ಮಾತ್ರ ವಾಚನ ಮಾಡಬೇಕು. ನೀವು ರಚಿಸುವ ಕವಿತೆಗಳು ಸಮಾಜ ಸ್ವಾಸ್ಥ್ಯ ಕೆಡಿಸುವಂತಿರಬಾರದು. ಹಿರಿಯ ಸಾಹಿತಿಗಳ ಕವಿತೆಗಳನ್ನು ನಾಲ್ಕಾರು ಭಾರಿ ಓದಿದರೆ ಗುಣಮಟ್ಟದ ಪ್ರಾಸ ಬದ್ದವಾದ ಸಾಹಿತ್ಯವನ್ನು ರಚಿಸಲು ಸಾಧ್ಯವಾಗುತ್ತದೆ ಎಂದರು.
ರಂಗಕರ್ಮಿ ಶಶಿಧರ್ ಭಾರಿಘಾಟ್ , ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿದರು.ಚಲನಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು ಸಾಹಿತಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಣೆ ಮಾಡಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಸಿ.ಮಂಜುನಾಥ್, ಹಿರಿಯ ಸಾಹಿತಿ ಡಾ.ಎಸ್. ಅಕ್ಬರ್ಭಾಷಾ, ಕರವೇ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಮೀರ್, ಯುವ ಬರಹಗಾರರ ಬಳಗದ ತಾಲೂಕು ಅಧ್ಯಕ್ಷ ಮೊಹಮದ್ ಅಜರುದ್ದೀನ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀಪ್ರಕಾಶ್, ಉಪಾಧ್ಯಕ್ಷೆ ಸುಜಾತ ಕೃಷ್ಣ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಗಾನಗಂಧರ್ವ ಸಂಗೀತ ಕಲಾ ತರಬೇತಿ ಶಾಲೆಯ ಶ್ರೀಕಾಂತ್ ಚಿಮ್ಮಲ್, ರವಿ ಶಿವಕುಮಾರ್ ಹಲವರು ಉಪಸ್ಥಿತರಿದ್ದರು.