ಮಂಗಳೂರು: ರೋಟರಿ ಸದಸ್ಯರು ತಮ್ಮ ಕಠಿಣ ಶ್ರಮ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಬಡವರ ಕಣ್ಣೀರು ಒರೆಸುವ ಕಾರ್ಯ ಕೈಗೊಳ್ಳಬೇಕು. ಅಲ್ಲದೆ ನಾಯಕತ್ವ ಗುಣಗಳನ್ನು ಬೆಳೆಸಿ ಯಶಸ್ಸು ಸಾಧಿಸಿ ಸಂಸ್ಥೆಗೆ ಗೌರವ ಸಂಪಾದಿಸಬೇಕು ಎಂದು ರೋಟರಿ ಸಂಸ್ಥೆಯ 3181ರ ಜಿಲ್ಲಾ ನಿಯೋಜಿತ ಗವರ್ನರ್ ಡಾ.ಸೂರ್ಯ ನಾರಾಯಣ ಹೇಳಿದರು.ಅವರು ಶನಿವಾರ ನಗರದ ಎ.ಜೆ. ಗ್ರ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಮಂಗಳೂರು ಸಿಟಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣದ ನೆರವೇರಿಸಿ ಮಾತನಾಡಿದರು.ವಲಯ ಸಹಾಯಕ ಗವರ್ನರ್ ಡಾ. ಅರವಿಂದ್ ರಾವ್ ಅವರು ಡಾ. ರಂಜನ್ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ ‘ಸಿಟಿ ಬಿಟ್ಸ್ ಆಂಡ್ ಬೈಟ್ಸ್’ನ್ನು ಅನಾವರಣಗೊಳಿಸಿದರು.ನೂತನ ಅಧ್ಯಕ್ಷ ಸನಿತ್ ಶೇಟ್, ತಮ್ಮ ಅಧಿಕಾರವಧಿಯಲ್ಲಿ ಪ್ರಸ್ತುತ ಸಾಲಿನ ಸಮಾಜಮುಖಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಇತ್ಯಾದಿ ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಯಶಸ್ವಿ ಅನುಷ್ಠಾನಕ್ಕೆ ಸದಸ್ಯರ ಸಹಕಾರ ಕೋರಿದರು.
ರೋಟರಿ ಜಿಲ್ಲಾ 3181ರ ಗವರ್ನರ್ ಸತೀಶ್ ಬೋಳಾರ್, ವಲಯ ಅಧಿಕಾರಿ ಗಣೇಶ್ ಕೊಡ್ಲಮೊಗರು, ಸಂಸ್ಥೆಯ ಸಲಹೆಗಾರ ರಾಜೇಂದ್ರ ಕಲ್ಬಾವಿ ಇದ್ದರು.
ನಿರ್ಗಮನ ಅಧ್ಯಕ್ಷೆ ಸಜ್ನಾ ಭಾಸ್ಕರ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಪದ್ಮನಾಭ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ನಿತಿನ್ ದೇವಾಡಿಗ ವಂದಿಸಿದರು.ನೂತನ ನಿರ್ದೇಶಕರು: ಡಾ. ರಂಜನ್ (ಸಂಸ್ಥೆ ಸೇವೆ), ಗಣೇಶ್ ಕೊಡ್ಲಮೊಗರು (ವೃತ್ತಿಪರ ಸೇವೆ), ಸರಿತಾ ಡಿಸೋಜಾ (ಸಮಾಜಸೇವೆ), ಪದ್ಮನಾಭ ನಾಯಕ್ (ಅಂತಾರಾಷ್ಟ್ರೀಯ ಸೇವೆ), ಕೆನ್ಯೂಟ್ ಪಿಂಟೊ (ಯುವಜನ ಸೇವೆ), ಪ್ರತಿಭಾ ರಾವ್ (ಕೋಶಾಧಿಕಾರಿ), ರಾಕೇಶ್ ಶೆಟ್ಟಿ (ದಂಡಾಧಿಕಾರಿ).