ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಿ: ಸೂರ್ಯಕಲಾ

KannadaprabhaNewsNetwork | Published : Jan 10, 2024 1:45 AM

ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಶಿಕ್ಷಕರು, ಇಸಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಶಿಕ್ಷಕರು, ಇಸಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಕೋರಾ ಹೋಬಳಿ ಬಸಪ್ಪನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಹಂತದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ 1 ರಿಂದ 8 ನೇ ತರಗತಿಗೆ ಸಂಬಂಧಿಸಿದಂತೆ ಸಮರ್ಪಕ ಕಲಿಕೆ ಆಗುತ್ತಿಲ್ಲ. ಶಾಲೆಗೆ ಬಂದು ಮಕ್ಕಳನ್ನು ಪ್ರಶ್ನಿಸಿದರೆ ಯಾವುದಕ್ಕೂ ಸಮರ್ಪಕ ಉತ್ತರ ಬರುತ್ತಿಲ್ಲ. ಇನ್ನು ಮುಂದೆ ಪ್ರತಿ ದಿನ ಬಿಆರ್‌ಸಿ. ಇಸಿಒಗಳು ಶಾಲೆಗಳಿಗೆ ಕೇವಲ ಭೇಟಿ ನೀಡುವುದಲ್ಲ, ಮಕ್ಕಳ ಕಲಿಕೆ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕೇವಲ ಒಂದು ಗಂಟೆ ಮಾತ್ರ ಶಾಲೆಗಳಿಗೆ ಭೇಟಿ ನೀಡಿ ಬಿಇಒಗಳಿಗೆ ವರದಿ ನೀಡುವುದಲ್ಲ. ಇಡೀ ದಿನ ಒಂದು ಶಾಲೆಯಲ್ಲೇ ಇದ್ದು, ಮಕ್ಕಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸುವ ಜತೆಗೆ ಶಿಕ್ಷಕರಿಗೂ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ನಮ್ಮ ಕೆಲಸ ಸಮಾಜಮುಖಿಯಾಗಿರಬೇಕು. ನಮ್ಮ ಕಾರ್ಯವೈಖರಿ ಟೀಕೆಗಳಿಗೆ ಗುರಿಯಾಗುವಂತಿರಬಾರದು. ಈ ನಿಟ್ಟಿನಲ್ಲಿ ಬಿಆರ್‌ಸಿಗಳು, ಇಸಿಒಗಳು ಹಾಗೂ ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಕ್ಲಸ್ಟರ್ ಮಟ್ಟದಿಂದ ಎನ್‌ಎಂಎಂಸ್ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಬರುಲು ಶಿಕ್ಷಕರಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ಇಂತಹ ಪರೀಕ್ಷೆಗಳಿಗೆ ತಮ್ಮ ತಮ್ಮ ಕ್ಲಸ್ಟರ್ ಮಟ್ಟದ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಮಗುವಿಗೆ ಕಲಿಕೆಯ ಮುಖಾಂತರ ಗಳಿಕೆಯಾಗಬೇಕು. ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರ ಮಾಡಬೇಕು. ಇದರೊಂದಿಗೆ ಸರ್ಕಾರದ ಸವಲತ್ತನ್ನು ಮಕ್ಕಳು ಹೆಚ್ಚು ಹೆಚ್ಚು ಪಡೆದುಕೊಳ್ಳುವಂತೆಯೂ ತಿಳಿವಳಿಕೆ ನೀಡಬೇಕು. ನಾವು ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಸಮಾಜದ ಒಳಿತಿನ ನಿಟ್ಟಿನಲ್ಲಿ ನಾವು ಸಾಗಬೇಕು ಎಂದು ಹೇಳಿದರು.

ಬಸಪ್ಪನಪಾಳ್ಯ ಶಾಲೆ ಪ್ರಾಚೀನವಾದ ಕಟ್ಟಡ ಹೊಂದಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ನಾವೆಲ್ಲರೂ ಪ್ರಾಚ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಬಿಆರ್‌ಸಿ ಗಾಯತ್ರಿ, ಇಸಿಒ ಚಂದ್ರಶೇಖರ್, ಶಿವರಾಜ್, ಮಂಜಣ್ಣ, ನವೀನ್‌ಕುಮಾರ್, ನಟರಾಜು, ಬಿಆರ್‌ಪಿ ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು.