ಕುಷ್ಟಗಿ: ಮತದಾರರ ಪಟ್ಟಿ ದೋಷರಹಿತ ಸಿದ್ಧಪಡಿಸುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಗುರಿಯಾಗಿದ್ದು, ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಬೂತ್ ಲೆವೆಲ್ ಏಜೆಂಟರು (ಬಿಎಲ್ಎ) ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್ಒ) ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಯಬೇಕಾದರೆ ಎನ್ಯೂಮರೇಷನ್ ಫಾರಂ ಭರ್ತಿ ಮಾಡುವುದು ಕಡ್ಡಾಯ. ಫಾರಂ ಸಲ್ಲಿಸದಿದ್ದರೆ ಮತದಾರರ ವಿವರ ಪರಿಶೀಲನೆಗೆ ತೊಂದರೆಯಾಗಬಹುದು. ಆದ್ದರಿಂದ ಪ್ರತಿಯೊಬ್ಬ ಅರ್ಹ ಮತದಾರರಿಗೂ ಫಾರಂ ತಲುಪಿಸಿ ಭರ್ತಿ ಮಾಡಿಸಬೇಕು ಎಂದು ಸೂಚಿಸಿದರು.
ಪ್ರತಿಯೊಬ್ಬ ಮತದಾರರ ಮನೆಗೆ ಎನ್ಯೂಮರೇಷನ್ ಫಾರಂ ಶೇ.100ರಷ್ಟು ತಲುಪಬೇಕು. ಈ ಕಾರ್ಯದಲ್ಲಿ ಬಿಎಲ್ಒಗಳಿಗೆ ಬೂತ್ ಲೆವೆಲ್ ಏಜೆಂಟರು ಸಂಪೂರ್ಣ ಸಹಕಾರ ನೀಡಬೇಕು. ಪ್ರತಿಯೊಬ್ಬ ಬಿಎಲ್ಒ ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಮೊದಲ ಬಾರಿ ಭೇಟಿ ನೀಡಿದಾಗ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಮರು ಭೇಟಿ ನೀಡುತ್ತಾರೆ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈ ತಪ್ಪಬಾರದು. ಅದೇ ಸಮಯದಲ್ಲಿ ಅನರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಗೊಂದಲದ ಪ್ರಶ್ನೆಗಳಿಗೆ ಬೂತ್ ಲೆವೆಲ್ ಏಜೆಂಟರು ಪರಿಹಾರ ಕಂಡುಕೊಂಡರು. ಜಿಲ್ಲಾಧಿಕಾರಿಗಳು ಖುದ್ದಾಗಿ ಸಮಸ್ಯೆ ನಿವಾರಿಸುವಲ್ಲಿ ಮುಂದಾದರು.