ಬಳ್ಳಾರಿ: ರಾಜ್ಯ ಸರ್ಕಾರ ಇದೇ ಮೇ 5ರಿಂದ ಜಾತಿ ಜನಗಣತಿ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದು, ಛಲವಾದಿ ಸಮುದಾಯದ ಜನರು, ಸಮೀಕ್ಷೆಯಲ್ಲಿ ''''ಛಲವಾದಿ'''' ಎಂದೇ ನಮೂದಿಸಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸಿ. ಶಿವಕುಮಾರ್ ಹೇಳಿದರು.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬೇಕು ಎಂಬುದು ದಲಿತ ಪರ ಸಂಘಟನೆಗಳ ಕಳೆದ ಮೂರು ದಶಕಗಳ ಹೋರಾಟವಾಗಿದೆ. ಸಾಕಷ್ಟು ಒತ್ತಡ ಹೇರಿದ ಬಳಿಕ ಮಣಿದಿರುವ ರಾಜ್ಯ ಸರ್ಕಾರ ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ಜನಸಂಖ್ಯೆಯನ್ನು ಗಣತಿ ಮಾಡಲು ಮುಂದಾಗಿದೆ. ಗಣತಿಯಲ್ಲಿನ ಜನಸಂಖ್ಯೆಯನ್ನು ಆಧರಿಸಿ ಒಳಮೀಸಲಾತಿ ನೀಡುವ ಸಾಧ್ಯತೆಯಿದೆ. ಆದ್ದರಿಂದ ಛಲವಾದಿ ಸಮುದಾಯದ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಸಮೀಕ್ಷೆ ವೇಳೆ ಛಲವಾದಿ ಎಂದೇ ನಮೂದಿಸಬೇಕು ಎಂದು ಅವರು ತಿಳಿಸಿದರು.
ಜಾತಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾಸಭಾ, ದಲಿತಪರ ಸಂಘಟನೆಗಳಿಂದಲೂ ನಗರ, ಗ್ರಾಮ, ಹೋಬಳಿ ಪ್ರದೇಶಗಳಿಗೆ ತೆರಳಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜತೆಗೆ ಯಾವುದೇ ಗೊಂದಲಗಳು ಇದ್ದಲ್ಲಿ ಮಹಾಸಭಾದ ಪದಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಪ್ಪಗಲ್ ಓಂಕಾರಪ್ಪ, ಜೆ.ಎಸ್. ಶ್ರೀನಿವಾಸ, ನಾಗಲಕೆರೆ ಗೋವಿಂದರಾಜುಲು, ಶಂಕರ, ನಾಗರಾಜ, ಶಂಕರ ನಂದಿಹಾಳ, ಸಿ. ಶ್ರೀನಿವಾಸ್, ಲೋಕೇಶ, ಕೊಳಗಲ್ಲು ಮಾನಯ್ಯ, ಗೋನಾಳ್ ಮಲ್ಲಿಕಾರ್ಜುನ ಇದ್ದರು.