ತೀರ್ಥಹಳ್ಳಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ (ಎಸ್ಸಿ) ಒಳ ಮೀಸಲಾತಿ ನಿಗಧಿಪಡಿಸಲು 101 ಜಾತಿಗಳ ಪೂರ್ಣ ವಿಚಾರಣಾ ಆಯೋಗ ರಚಿಸಿದೆ. ಸಮೀಕ್ಷೆ ಮೇ 5 ರಿಂದ 17ವರೆಗೆ ನಡೆಯಲಿದ್ದು ಆದಿ ಕರ್ನಾಟಕ ಜಾತಿಯ ಅಡಿಯಲ್ಲಿ ಉಪಜಾತಿ ಚನ್ನಯ್ಯ ಎಂದು ನಮೂದಿಸಬೇಕೆಂದು ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದೊಡ್ಮನಿ ಮನವಿ ಮಾಡಿದರು.
ಆದಿ ಕರ್ನಾಟಕ ಎಂಬುದು ಜಾತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರ ಒಳಗೆ ಉಪಜಾತಿಗಳು ಇವೆ. ಮೈಸೂರು ರಾಜ್ಯದ ಅವಧಿಯಲ್ಲಿ ಕನ್ನಡ ಮಾತನಾಡುವ ವರ್ಗವನ್ನು ಆದಿ ಕರ್ನಾಟಕ, ತೆಲುಗು ಮಾತನಾಡುವವರನ್ನು ಆದಿ ಆಂಧ್ರ ಎಂದು ನೊಂದಾಣಿ ಮಾಡಿಕೊಂಡಿದ್ದರು. ಹಿಂದೆ ಆದ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಈಗಾಗಲೇ ಸಮಾಜದ ಬಂಧುಗಳನ್ನು ಭೇಟಿಯಾಗಿದ್ದೇವೆ. ಅವರ ಸಂಪ್ರದಾಯ, ಆಚಾರ, ವಿಚಾರದ ಬಗ್ಗೆ ಸ್ಪಷ್ಟತೆ ಮೂಡಿಸಿದ್ದೇವೆ ಎಂದರು.
ರಾಜ್ಯ ಸಂಚಾಲಕ ಎಚ್.ಕೆ.ಶಿವಾನಂದ, ಪ್ರಧಾನ ಕಾರ್ಯದರ್ಶಿ ಮಂಜಪ್ಪ ಎಚ್., ಉಪಾಧ್ಯಕ್ಷ ರಂಗಪ್ಪ ಹೊನ್ನೇಸರ ಮುಖಂಡರಾದ ನವೀನ್ ಕುಮಾರ್, ಗಿರೀಶ್ ಪಡುವಳ್ಳಿ, ವಿಶ್ವನಾಥ ಹಾರೋಗೊಳಿಗೆ, ಬಸವಂತಪ್ಪ ಕೋಟೆ, ರುದ್ರಪ್ಪ ಬೈರೆಕೊಪ್ಪ, ಯಲ್ಲಪ್ಪ ಬೇಡನಬೈಲು, ಉಮೇಶ್ ಕೆರೆಕೋಡಿ, ನಾಗರಾಜ ಎ.ಕೆ. ಷಣ್ಮುಖ ತಳವಾರ ಇದ್ದರು.