ಮೇದರಬೀದಿಯ ಶ್ರೀ ಕರಿಯಮ್ಮ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆ
ಫೆಬ್ರವರಿ 20 ರಿಂದ 25 ರ ವರೆಗೆ ಪಟ್ಟಣದ ಮೇದರಬೀದಿಯ ಶ್ರೀ ಕರಿಯಮ್ಮ ಹಾಗೂ ಶ್ರೀ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚನ್ನಗಿರಿಯ ತಾಲೂಕಿನ ದುರ್ವಿಗರ ಕೊಲ್ಲೇಶ್ವರಿ ದೇವಿ, ತರೀಕೆರೆ ಗುಳ್ಳಮ್ಮ ದೇವಿ ಹಾಗೂ ನ.ರಾ.ಪುರ ಮೇದರಬೀದಿ ಅಂತರಘಟ್ಟಮ್ಮ ದೇವಿ ನರಸಿಂಹರಾಜಪುರ ಪುರ ಪ್ರವೇಶ ಕಾರ್ಯಕ್ರಮ ಗುರುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಿಂದ ಹೊರಟ ಮೂರು ದೇವಿಯ ಪಲ್ಲಕ್ಕಿ ಉತ್ಸವ ಮುಖ್ಯ ರಸ್ತೆಯಲ್ಲಿ ಸಾಗಿ ಪ್ರವಾಸಿ ಮಂದಿರ ತಲುಪಿ ನಂತರ ಮೇದರಬೀದಿಯ ಶ್ರೀ ಕರಿಯಮ್ಮ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿಯ ದೇವಸ್ಥಾನ ತಲುಪಿತು.ಮೆರವಣಿಗೆಯಲ್ಲಿ ದಕ್ಷ್ಮಿಣ ಕನ್ನಡ ಜಿಲ್ಲೆಯ ಬೃಹತ್ ಗೊಂಬೆಗಳ ಕುಣಿತ, ಒಂಟೆ, ಕುದುರೆ, ಜೋಡೆತ್ತುಗಳ ಪ್ರದರ್ಶನ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಮೇದ ಸಮಾಜದ ಮಹಿಳೆಯರು ದೇವತೆಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿದರು. ವಿಶ್ವ ಕರ್ಮ ಸಮಾಜದವರ ಚಂಡೆ ವಾದ್ಯ ಮೇಳ, ನಾಸಿಕ್ ಡೋಲ್, ಕಡೂರಿನ ಬಾಲು ಮತ್ತು ತಂಡದವರ ಹಲಗೆ, ತಮ್ಮಾಳ ವಾದ್ಯ ಮೆರವಣಿಗೆಯ ಆಕರ್ಷಣೆಯಾಗಿತ್ತು. ಚಿತ್ತಾಕರ್ಷಕ ಸಿಡಿ ಮದ್ದು ಪ್ರದರ್ಶನ ಗಮನ ಸೆಳೆಯಿತು.
3 ದೇವತೆಗಳ ಪುರ ಪ್ರವೇಶದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಮುಂಬಾಗದಲ್ಲಿ ಹಾಕಿದ್ದ ಬೃಹತ್ ಗಾತ್ರದ ಚಾಮುಂಡೇಶ್ವರಿ ದೇವಿಯ ಮಹಾ ದ್ವಾರ ಸಾರ್ವಜನಿಕರ ಗಮನ ಸೆಳೆಯಿತು.