ಕನ್ನಡಪ್ರಭ ವಾರ್ತೆ ಬೇಲೂರು
ಪರಿಸರ ದಿನಾಚರಣೆ ಪ್ರತಿನಿತ್ಯ ನಿತ್ಯೋತ್ಸವ ಆಗುವಂತೆ ಆಚರಿಸಬೇಕು ಎಂದು ಫಾದರ್ ಜೋಸೆಫ್ ಪಿಂಟೊ ಹೇಳಿದರು.ಪಟ್ಟಣದ ಜೆಪಿ ನಗರದ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲೂಕು ಘಟಕ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಂಟ್ ಕಾರ್ಮೆಲ್ ವಿದ್ಯಾಸಂಸ್ಥೆ ವ್ಯವಸ್ಥಾಪಕ ಫಾದರ್ ಪಿಂಟು, ಪರಿಸರ ದಿನಾಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಆಚರಣೆಗೆ ಮಾತ್ರ ಸೀಮಿತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ನಿತ್ಯೋತ್ಸವದ ಕಾಯಕವಾದಾಗ ಮಾತ್ರ ಅರ್ಥ ಬರುತ್ತದೆ ಎಂದರು. ಭೂಮಿಯ ಪರಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು ಸಂಗ್ರಹವಾಗುವುದರಿಂದ ಮಾನವರು, ವನ್ಯಜೀವಿಗಳ ಮತ್ತು ಅವುಗಳ ಅವಾಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ತೊಲಗಿಸಬೇಕು ಎಂಬ ಪ್ರಸಕ್ತ ವರ್ಷದ ಪರಿಸರ ದಿನದ ಘೋಷವಾಕ್ಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು ಎಂದರು.ಬೇಲೂರು ತಾಲೂಕು ಜಾನಪರ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಅನಾದಿ ಕಾಲದಿಂದ ಮನುಷ್ಯ ಕೃಷಿಯಲ್ಲಿ ಬದುಕು ನಡೆಸುತ್ತಾ ಬಂದಿದ್ದಾನೆ. ಪ್ರಸಕ್ತ ಶತಮಾನದ ಕುಲಾಂತರಿ ಕೃಷಿ ಹಾಗೂ ತಾಂತ್ರಿಕ ಕೃಷಿ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ. ಇದಕ್ಕೆ ಆಳುವ ಸರ್ಕಾರಗಳೇ ಕುಮ್ಮಕ್ಕು ನೀಡುತ್ತಿರುವುದು ನಿಜಕ್ಕೂ ಶೋಚನೀಯ, ಬೇಕಾಬಿಟ್ಟಿ ಪ್ಲಾಸ್ಟಿಕ್ ತಯಾರಿಕೆಗೆ ಅವಕಾಶ, ಮೀತಿಮೀರಿದ ಕಳೆನಾಶಕಗಳ ಬಳಕೆಯಿಂದ ಮಣ್ಣು, ನೀರು ಜೊತೆಗೆ ಗಾಳಿ ಕೂಡ ಕಲುಷಿತವಾಗಿದೆ. ಅನಾರೋಗ್ಯದಿಂದ ಮಾನವ ಅಲ್ಪ ಬದುಕಿಗೆ ತೃಪ್ತಿ ಪಡಬೇಕಿದೆ. ಸಣ್ಣ ವಯಸ್ಸಿನಲ್ಲಿಯೇ ಪರಿಸರದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ಧೂರಿ ಚೇತನ್ ಮಾತನಾಡಿ, ಪರಿಸರ ಶಿಕ್ಷಣ ಅವರ ಕಲಿಕೆ ಯೋಗಕ್ಷೇಮ ಮತ್ತು ಭವಿಷ್ಯದ ಅವಕಾಶಗಳನ್ನು ರಕ್ಷಿಸುವಲ್ಲಿ ಯುವ ಜನತೆಗೆ ಸಾಕಷ್ಟು ಈ ಬಗ್ಗೆ ತಿಳಿವಳಿಕೆ ನೀಡಬೇಕಿದೆ. ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ, ವರ್ಷಪೂರ್ತಿ ಆಚರಿಸುವ ಮತ್ತು ಗಿಡ, ಮರ ಸಂರಕ್ಷಣೆ ಜೊತೆಗೆ ನೀರು ಗಾಳಿಯನ್ನು ಮಾಲಿನ್ಯವಾಗಂತೆ ತಡೆಯಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಪರಿಷತ್ತು ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉತ್ತಮ ಕೆಲಸವನ್ನು ನಡೆಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಗರವಾಸಿಗಳಿಂದ ಪರಿಸರ ನಾಶವಾಗುತ್ತಿದೆ. ತಮ್ಮ ಆಡಂಬರದ ಜೀವನಕ್ಕೆ ವೀಕೆಂಡ್ ಹೆಸರಿನಲ್ಲಿ ಪ್ರವಾಸಿ ತಾಣಗಳನ್ನು ಹಾಳು ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಪರಿಸರವನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಅವರು ತಮಗಾಗಿ ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚು ಆರೋಗ್ಯಕರ ಮತ್ತು ಸುಸ್ಥಿರ ಪರಿಸರವನ್ನು ಜಗತ್ತಿಗೆ ಕೊಡುಗೆ ನೀಡುವ ದೂರದೃಷ್ಟಿಯಿಂದ ಪರಿಸರದ ಬಗ್ಗೆ ಜಾಗೃತಿ ಅವಶ್ಯವಿದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್.ರಾಜೇಗೌಡ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಫಾದರ್ ಪ್ರಕಾಶ್ ಥಾವೋರ್, ತಾಲೂಕು ಜಾನಪದ ಪರಿಷತ್ತು ಪ್ರಧಾನ ಕಾರ್ಯದರ್ಶಿ ಧನಂಜಯ್, ಭಾರತೀಯ ರೆಡ್ಕ್ರಾಸ್ ಬೇಲೂರು ಉಪಸಭಾಪತಿ ಸುಲೇಮಾನ್, ಪ್ರಗತಿ ಪರ ಕೃಷಿಕ ರಾಜಶೇಖರ್, ಸಾಹಿತಿ ಇಂದರಮ್ಮ, ದಿನೇಶ್, ನರಸಿಂಹಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.ಇದೇ ವೇಳೆ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.