ನಾಗರಿಕರಲ್ಲಿ ಪರಿಸರ ಜಾಗೃತಿ ಬಹಳ ಅಗತ್ಯ

KannadaprabhaNewsNetwork | Published : Jun 6, 2025 12:40 AM
ಪರಿಸರ ದಿನವೆಂದರೆ ಕೇವಲ ಸಸಿ ನೆಟ್ಟು ಒಂದು ದಿನದ ಮಟ್ಟಿಗೆ ಆಚರಿಸುವ ಕಾರ್ಯಕ್ರಮವಲ್ಲ, ನಿರಂತರವಾಗಿ ಉತ್ತಮ ವಾತಾವರಣಕ್ಕಾಗಿ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು ಇದು ಎಲ್ಲರ ಜವಾಬ್ದಾರಿ ಕೂಡ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕರೆ ನೀಡಿದರು. ನಾಗರಿಕರು ಮತ್ತು ಎಲ್ಲರೂ ಸಹ ಜಾಗೃತಿ ವಹಿಸಬೇಕು ಹಾಗೂ ಪ್ಲಾಸ್ಟಿಕ್ ಬಳಸುವುದನ್ನು ಕಡ್ಡಾಯವಾಗಿ ನಿಲ್ಲಿಸಿ ಎಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪರಿಸರ ದಿನವೆಂದರೆ ಕೇವಲ ಸಸಿ ನೆಟ್ಟು ಒಂದು ದಿನದ ಮಟ್ಟಿಗೆ ಆಚರಿಸುವ ಕಾರ್ಯಕ್ರಮವಲ್ಲ, ನಿರಂತರವಾಗಿ ಉತ್ತಮ ವಾತಾವರಣಕ್ಕಾಗಿ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು ಇದು ಎಲ್ಲರ ಜವಾಬ್ದಾರಿ ಕೂಡ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕರೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನ ಸಮಾರಂಭದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ನಗರದಲ್ಲಿ ಪರಿಸರ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ನೀವು ನಿಮ್ಮ ಮನೆಯಲ್ಲಿ ಅಷ್ಟೇ ಅಲ್ಲ ನೆರೆಹೊರೆಯವರಲ್ಲಿ ಸಹ ಮನೆಯಲ್ಲಿನ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆ ಆಟೋ ಮನೆ ಬಾಗಿಲಿಗೆ ಬಂದಾಗ ಅದರಲ್ಲಿ ಹಾಕುವಂತೆ ಎಲ್ಲರಲ್ಲೂ ಜಾಗೃತಿಯ ಮೂಡಿಸುವ ಕಾರ್ಯವನ್ನು ನೀವು ಮಾಡಬೇಕು ಎಂದರು. ಪ್ಲಾಸ್ಟಿಕ್ ಬಳಕೆ ಅಧಿಕವಾಗಿದ್ದು ಅದನ್ನು ನಿಯಂತ್ರಿಸಲಾಗುತ್ತಿದೆ. ನೀವು ಸಹ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಅದರಿಂದ ಮಾರಣಾಂತಿಕ ಕಾಯಿಲೆಗಳು ಅಷ್ಟೇ ಅಲ್ಲ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದೆ. ನಾಗರಿಕರು ಮತ್ತು ಎಲ್ಲರೂ ಸಹ ಜಾಗೃತಿ ವಹಿಸಬೇಕು ಹಾಗೂ ಪ್ಲಾಸ್ಟಿಕ್ ಬಳಸುವುದನ್ನು ಕಡ್ಡಾಯವಾಗಿ ನಿಲ್ಲಿಸಿ ಎಂದು ಅವರು ಮನವಿ ಮಾಡಿದರು, ಕಾಲೇಜು ಪ್ರಭಾರ ಪ್ರಾಂಶುಪಾಲ ಗೋವಿಂದರಾಜ್ ಮಾತನಾಡಿ, ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾದರೂ ನಮ್ಮ ಸುತ್ತಲ ಪರಿಸದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಮನೆಯ ಅಕ್ಕಪಕ್ಕದವರಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಮನೆಯ ಆವರಣದಲ್ಲಿ ಎಷ್ಟು ಅವಕಾಶವಿದೆಯೋ ಅಲ್ಲಿ ಹಸಿರನ್ನು ಬೆಳೆಯುವ ಪ್ರಯತ್ನವನ್ನು ಮಾಡಿ, ಪರಿಸರ ಉತ್ತಮವಾಗಿದ್ದರೆ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ಬಾಲಕಿಯರ ಪ್ರೌಢಶಾಲಾ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್, ಕಾಲೇಜಿನ ಉಪನ್ಯಾಸಕರುಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.