ಕಾಂಗ್ರೆಸ್‌ ದುರಾಡಳಿತದಿಂದ ರೋಸಿಹೋಗಿರುವ ಜನರು: ಅಶೋಕ್‌ಗೌಡ

KannadaprabhaNewsNetwork | Published : Jun 6, 2025 12:40 AM
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರೇ ಗೃಹಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರ ಹಿರಿತನಕ್ಕೆ ತಕ್ಕ ಗೌರವವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ, ಒಟ್ಟಿನಲ್ಲಿ ಗೃಹ ಮಂತ್ರಿ ಇದ್ದಾರೆಯೇ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್ ದುರಾಡಳಿತದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಜನರು ರೋಸಿ ಹೋಗಿ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶೋಕ್‌ಗೌಡ ಆರೋಪಿಸಿದರು.

ಆರ್‌ಸಿಬಿ ವಿಜಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬುಧವಾರ ನಡೆದ ದುರಂತವೇ ಕಾಂಗ್ರೆಸ್‌ನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇವರ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಅದೆಷ್ಟೋ ಅಮಾಯಕ ಜನರ ನಡುವೆ ಜಾತಿ ಮತ್ತು ಧರ್ಮದ ಸಂಘರ್ಷ ಹೆಚ್ಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರೇ ಗೃಹಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರ ಹಿರಿತನಕ್ಕೆ ತಕ್ಕ ಗೌರವವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ, ಒಟ್ಟಿನಲ್ಲಿ ಗೃಹ ಮಂತ್ರಿ ಇದ್ದಾರೆಯೇ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿಯಲ್ಲಿ ಮೋಸ ಮಾಡಿರುವ ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣೆರೆಚಿದೆ. ಕೆಆರ್‌ಎಸ್ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡಿ ರೈತರಿಗೆ ಮಾರಕವಾಗಲು ಹೊರಟಿರುವ ಕಾಂಗ್ರೆಸ್ ರೈತರ ಬದುಕು ಕಸಿದುಕೊಳ್ಳಲು ಹೊರಟಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೀವೇನಾದರೂ ಕಾಮಗಾರಿ ನಡೆಸುವ ಪಾಟ್ನರ್ ಹೊಂದಿದ್ದರೆ ಬಹಿರಂಗಗೊಳಿಸಿ ಎಂದು ತಿವಿದರು.

ಮಂಡ್ಯ ಜಿಲ್ಲೆಯಲ್ಲಿ ಕೋಮುವಾದ ಬಣ್ಣ ಬಳಿದು ಅಶಾಂತಿ ವಾತಾವರಣ ಉಂಟು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನೂ ಇಲ್ಲ. ಕೇಂದ್ರ ಸರ್ಕಾರದಿಂದ ಜಲ್‌ ಜೀವನ್ ಮಿಷನ್ ಯೋಜನೆಯಡಿ ಎರಡು ಹಂತದಲ್ಲಿ ಜಿಲ್ಲೆಗೆ ಅಭಿವೃದ್ಧಿ ಕಾರ್ಯ ನಡೆದಿದೆ. ಜಿಲ್ಲೆ ಶಾಸಕರು ಹಾಗೂ ಕೃಷಿ ಮಂತ್ರಿಗಳು ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಶೋಕ್, ನಗರ ಮಂಡಳಿ ಅಧ್ಯಕ್ಷ ವಸಂತ್‌ಕುಮಾರ್‌, ಮಾಧ್ಯಮ ವಕ್ತಾರ ನಾಗಾನಂದ್ ಇದ್ದರು.