ಚನ್ನಪಟ್ಟಣ: ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ಹಾಗೂ ಹಸಿರು ಪರಿಸರ ನಿರ್ಮಿಸುವ ಉದ್ದೇಶದಿಂದ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇಕೋ ಕ್ಲಬ್ ಸಹಯೋಗದಲ್ಲಿ ಇತಿಹಾಸ ಪ್ರಸಿದ್ಧ ಕೂರಣಗೆರೆ ಶ್ರೀ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಸೀಡ್ಬಾಲ್ ಅಭಿಯಾನ ಹಮ್ಮಿಕೊಂಡಿದ್ದರು.
ಹೊಂಗೆ, ಹೊನ್ನೆ, ಮತ್ತಿ, ಬಿದಿರು, ರಕ್ತಚಂದನ, ತಾಳೆ, ಹುಣಸೆ, ಬೇವು, ಆಲದ ಮರ, ಜಾಲಿ, ಬಿಳಿ ಶ್ರೀಗಂಧ, ನೇರಳೆ, ಕಾಡುಬಾದಾಮಿ, ಸೀತಾಫಲ, ಮುತ್ತುಗ, ನೆಲ್ಲಿಕಾಯಿ ಸೇರಿದಂತೆ ವಿವಿಧ ಜಾತಿಯ ಮರಗಳ ಬೀಜಗಳನ್ನು ಬಳಸಲಾಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಟ್ಟಕ್ಕೆ ಚಾರಣ ಕೈಗೊಂಡ ವಿದ್ಯಾರ್ಥಿಗಳು ಬೆಟ್ಟದ ವಿವಿಧ ಭಾಗಗಳು, ಖಾಲಿ ಪ್ರದೇಶಗಳು, ರಸ್ತೆ ಬದಿಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ಸೀಡ್ಬಾಲ್ ಬಿತ್ತಿದರು. ಹಲವೆಡೆ ಸಣ್ಣ ಗುಂಡಿಗಳನ್ನು ತೆಗೆದು ಬೀಜದ ಉಂಡೆಗಳನ್ನು ಹಾಕಿ ಮಣ್ಣಿನಿಂದ ಮುಚ್ಚಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ಮರಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಅರಣ್ಯ ಪ್ರದೇಶವನ್ನು ವೃದ್ಧಿಸುವುದು ಜಾಗತಿಕ ತಾಪಮಾನ ಏರಿಕೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೀಡ್ಬಾಲ್ ಅಭಿಯಾನದಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವ ಜತೆಗೆ, ಪ್ರಕೃತಿಯೊಂದಿಗೆ ಅವರ ನೇರ ಸಂಬಂಧವನ್ನು ಬೆಳೆಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಶ್ಮಿ, ಬಿ.ಕೆ.ಲತಾ, ಮಧುಸೂದನ್ , ಶಶಿರೇಖಾ, ಶಶಿಕುಮಾರ್, ರಾಜಣ್ಣ, ರಾಜೇಶ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಕೂರಣಗೆರೆ ಶ್ರೀ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಸೀಡ್ಬಾಲ್ ಅಭಿಯಾನ ನಡೆಸಿದರು.