ಕೈಗಾರಿಕ ಯುಗ ಆರಂಭದಿಂದ ಪರಿಸರ ನಾಶ

KannadaprabhaNewsNetwork | Published : Jun 7, 2024 12:15 AM

ಸಾರಾಂಶ

ವಿಶ್ವ ಪರಿಸರ ದಿನಾಚರಣೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ವಿಷಾದ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ವಿಜ್ಞಾನ-ತಂತ್ರಜ್ಞಾನ, ಕೈಗಾರಿಕಾ ಯುಗ ಆರಂಭವಾದಾಗಿನಿಂದಲೂ ಪರಿಸರ ನಾಶವಾಗುತ್ತಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ವಿಷಾಧಿಸಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದ ಜನ ಗಿಡ-ಮರ, ಬಳ್ಳಿ, ಪಶು, ಪಕ್ಷಿ ಪ್ರಾಣಿಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದರಿಂದ ಆರೋಗ್ಯವಂತರಾಗಿರುತ್ತಿದ್ದರು. ಎಲ್ಲಿ ಅರಣ್ಯ, ಗಿಡ-ಮರ, ಫಲವತ್ತತೆಯಾದ ಮಣ್ಣು ಇರುತ್ತದೋ ಅಲ್ಲಿ ಉತ್ತಮ ಆರೋಗ್ಯವಿರುತ್ತದೆ. ಎಲ್ಲಿ ಗಿಡ ಮರಗಳು, ಪರಿಸರವ ನಾಶ ಮಾಡಲಾಗುತ್ತದೆಯೇ ಅಲ್ಲಿ ಬರಗಾಲ ಎದುರಿಸಬೇಕಾಗುತ್ತದೆ. ಕೈಗಾರಿಕೆಗಳಿಂದ ಹೊರ ಸೂಸುವ ತ್ಯಾಜ್ಯಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಜಪಾನ್, ಚೀನಾದಲ್ಲಿ ಇಂದಿಗೂ ಸೈಕಲ್‍ ಬಳಸಲಾಗುತ್ತಿದೆ. ಅದೇ ನಮ್ಮ ದೇಶದಲ್ಲಿ ಪ್ರತಿಯೊಬ್ಬರು ವಾಹನ ಬಳಸುತ್ತಿರುವುದರಿಂದ ನಾನಾ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದರು.

ಗಿಡ ನೆಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಸಿರೆ ಉಸಿರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಇಂದಿನಿಂದಲೇ ಸಸಿ ನೆಡುವ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಕಾರ್ಯಕ್ರಮವಿರಲಿ ಸಸಿಯ ಉಡುಗೊರೆ ಕೊಡುವ ಸಂಪ್ರದಾಯ ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು. ನ್ಯಾಯವಾದಿ ಕೆ.ಎಸ್.ವಿಜಯ ಮಾತನಾಡಿ, ಪರಿಸರದ ಮೇಲೆ ಮಾನವ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವುದರಿಂದ ಭೂಮಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಐದು ಕೋಟಿ ಸಸಿಗಳನ್ನು ನೆಡುವಂತೆ ರಾಜ್ಯ ಸರ್ಕಾರ ಘೋಷಿಸಿದೆ. ಸಾಲು ಮರದ ತಿಮ್ಮಕ್ಕ, ಮಲ್ಲಾಡಿಹಳ್ಳಿಯ ತಿರುಕು ಇವರು ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಶಿಕ್ಷಣ ವೃತ್ತಿಯಾಗಬಾರದು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬೇಕು. ಮಕ್ಕಳ ಮೇಲೆ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿಯಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಕಲುಷಿತವಾಗಿರುವ ಸಮಾಜದಲ್ಲಿ ಸಾಮಾಜಿಕ ಪಿಡುಗುಗಳನ್ನು ಓಡಿಸಬೇಕಿದೆ ಎಂದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಎಂ.ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ವಿದ್ಯಾರ್ಥಿಗಳೊಂದಿಗೆ ಪರಸರ ಸಂರಕ್ಷಣೆ ಕುರಿತು ಸಂವಾದ ನಡೆಸಿದರು. ಎಂ.ಆರ್.ನಾಗರಾಜ್, ವೆಂಕಟಶಿವರೆಡ್ಡಿ, ಆರ್.ಟಿ.ಎಸ್.ಶ್ರೀನಿವಾಸ್, ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ.ರಾಜಶೇಖರ್, ಸಹ ಕಾರ್ಯದರ್ಶಿ ನವೀನ್ ಪಿ.ಆಚಾರ್ ಇದ್ದರು.

Share this article