ಕುಕನೂರು:
ಭೂಮಿಯ ಮೇಲೆ ಮಾನವನ ಜತೆಗೆ ಜೀವರಾಶಿಗಳ ಉಳಿವಿಗೆ ಪರಿಸರ ಸಂರಕ್ಷಣೆ ಅವಶ್ಯ ಎಂದು ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜರುಗಿದ ಸಸಿ ನೆಡುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪರಿಸರ ತಜ್ಞರ ಪ್ರಕಾರ ಸಮತೋಲನ ಪರಿಸರ ವ್ಯವಸ್ಥೆಯಲ್ಲಿ ಶೇ. 33ರಷ್ಟು ಮರ-ಗಿಡ ಇರಬೇಕು. ಅಂದಾಗ ಮಾತ್ರ ಯಾವುದೇ ಆತಂಕ ಇರುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮರ-ಗಿಡ ಕಡಿದು ಪರಿಸರ ಅಸಮತೋಲನ ಮಾಡುತ್ತಿದ್ದೇವೆ. ಇದರಿಂದಾಗಿ ಅತಿಯಾದ ಬಿಸಿಲು, ಅಕಾಲಿಕ ಮಳೆ, ಪರಿಸರ ನಾಶದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಅದಕ್ಕಾಗಿ ಕನಿಷ್ಠ ವರ್ಷಕ್ಕೆ ಒಬ್ಬ ವ್ಯಕ್ತಿ ಲಭ್ಯವಿರುವ ಸ್ಥಳದಲ್ಲಿ ಕನಿಷ್ಠ ಒಂದು ಗಿಡ ನೆಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.ನರೇಗಾ ಯೋಜನೆಯಡಿ ಅರಣ್ಯೀಕರಣಕ್ಕೆ ಹೆಚ್ಚಿನ ಅವಕಾಶವಿದ್ದು ತಮ್ಮ ಜಮೀನಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಂಡಲ್ಲಿ ನರೇಗಾ ಸಹಾಯಧನ ಸಿಗಲಿದೆ. ತಮ್ಮ ಹೊಲಗಳ ಸುತ್ತ ಬದು ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರಮಾಣದ ನೀರು ಸಂರಕ್ಷಿಸಿ ಅಂತರ್ಜಲ ಹೆಚ್ಚಿಸಬಹುದು. ಅದಕ್ಕಾಗಿ ಎಲ್ಲರೂ ಪರಸರ ಉಳಿವಿಗಾಗಿ ಪಣ ತೋಡಬೇಕು ಎಂದರು.
ಎಲ್ಲ ವಿದ್ಯಾರ್ಥಿಗಳಿಗೆಗಳಿಗೆ ತಲಾ ಎರಡು ಸಸಿ ದತ್ತು ಕೊಡುವ ಮೂಲಕ ಸಸಿಗಳ ಪಾಲನೆ, ಪೋಷಣೆ ಮಾಡಬಹುದು. ದತ್ತು ಸ್ವೀಕರಿಸಿದ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೊಗುವಾಗ ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಸಸಿ ದತ್ತು ಕೊಡಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರ, ಅರಣ್ಯಾಧಿಕಾರಿ ಬಸವರಾಜ ಗೋಗೇರಿ, ಪಿಡಿಒ ನೀಲಂ ಚಳಗೇರಿ, ನರೇಗಾ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಉಪನ್ಯಾಸಕ ಶಿವಾನಂದ ಮೆಣದಾಳ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಚಿದಾನಂದ ಓಲೆಕಾರ, ಶಾಮಿದ್ ಸಾಬ್, ಗ್ರಾಪಂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.