ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮುಂದುವರಿದ ತಂತ್ರಜ್ಞಾನ ಮತ್ತು ಹೆಚ್ಚುತ್ತಿರುವ ನಗರೀಕರಣದಿಂದಾಗಿ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಆರ್.ಹಂಸವಿ ತಿಳಿಸಿದರು. ತಾಲೂಕಿನ ವಿದುರಾಶ್ವತ್ಥದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ 7 ನೇ ದಿನಗಳ ವಾರ್ಷಿಕ ವಿಶೇಷ ಶಿಬಿರದ 6 ನೇ ದಿನವಾದ ಗುರುವಾರ ವೀರಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಸೇವಾ ಭಾವನೆ ಬೆಳೆಸಿವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ಸೇವಾ ಮನೋಭಾವದ ಜತೆಗೆ ನೆರೆಯ ಪರಿಸರ ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಉಳಿಸುವುದು ಅನಿವಾರ್ಯವಾಗಿದೆ. ವಿಶೇಷ ದಿನಗಳ ನೆನಪಿನಲ್ಲಿ ಮನೆಯಂಗಳ ಮತ್ತು ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗೋಣ ಎಂದು ಹೇಳಿದರು. ಎನ್ನೆಸ್ಸೆಸ್ ಶಿಬಿರ ಸಹಕಾರಿ
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಸಹ ಪ್ರಾಧ್ಯಾಪಕರಾದ ಡಾ.ವೆಂಕಟಾಚಲಪತಿ ಮಾತನಾಡಿ, ಎನ್ ಎಸ್ ಎಸ್ ಶಿಬಿರಗಳು ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಅನುಭವ ನೀಡುತ್ತವೆ. ಸಮುದಾಯದಲ್ಲಿ ಬೆರೆತು ಬಾಳುವ ಜತೆಗೆ ಶಿಸ್ತು ಮತ್ತು ಸಂಯಮವನ್ನು ನೀಡುತ್ತದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಅನುಭವ ಪಡೆಯುವುದು ನಿಜಕ್ಕೂ ನಿಮ್ಮೆಲ್ಲರ ಬದುಕಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು. ಉಪನ್ಯಾಸಕ ಎ.ಎಸ್.ಜಗನ್ನಾಥ್, ಚಿಂತಕ ಭರತ್ ರಾಜ್, ಸಹ ಪ್ರಾಧ್ಯಾಪಕ ವೆಂಕಟಾಚಲಪತಿ, ಡಾ.ಸುಜಾತಮ್ಮ, ಕೆ.ವಿ.ವೀರಭದ್ರಯ್ಯ, ನಿವೃತ್ತ ಪ್ರಾಂಶುಪಾಲರಾದ ಡಾ.ಸಿ.ನಾಗರತ್ನಮ್ಮ, ಪತ್ರಕರ್ತರಾದ ಎ.ಎಸ್.ಜಗನ್ನಾಥ್ ಆರ್ಕುಂದ, ಇತರರು ಭಾಗವಹಿಸಿದ್ದರು.