ಜಾಗತಿಕ ತಾಪಮಾನ ಇಳಿಕೆಗೆ ಪರಿಸರ ಸಂರಕ್ಷಣೆ ಮುಖ್ಯ: ಪ್ರಕಾಶ ಕೋಳಿವಾಡ

KannadaprabhaNewsNetwork | Published : Jun 7, 2025 4:07 AM
ಅರಣ್ಯ ಸಂಪತ್ತು ನಶಿ ಹೋಗದಂತೆ ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ರಾಣಿಬೆನ್ನೂರು: ಇಂದಿನ ಜಾಗತಿಕ ತಾಪಮಾನ ಇಳಿಮುಖವಾಗಲು ಪರಿಸರ ಸಂರಕ್ಷಣೆ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವ ಮೂಲಕ ನಗರವನ್ನು ಗ್ರೀನ್ ಸಿಟಿವಾಗಿ ಪರಿವರ್ತನೆ ಮಾಡಲು ಶ್ರಮಿಸಬೇಕು ಎಂದು ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ಹುಣಸಿಕಟ್ಟೆ ರಸ್ತೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಳಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ಮತ್ತು ನಿವೃತ್ತ ಯೋಧರ ಸಂಘದ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಸಂಪತ್ತು ನಶಿ ಹೋಗದಂತೆ ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈಗಾಗಲೇ ದೊಡ್ಡ ಕೆರೆ ಸುತ್ತಮುತ್ತ ಸಸಿಗಳನ್ನು ನೆಡಲಾಗುತ್ತಿದೆ. ಅದರಂತೆ ನಗರಸಭೆ ವತಿಯಿಂದ ನಗರದ ಎಲ್ಲ ಹೊಸ ಉದ್ಯಾನಗಳಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ರಾಜ್ಯದಲ್ಲಿಯೇ ನಗರವನ್ನು ಗ್ರೀನ್ ಸಿಟಿ ನಿರ್ಮಾಣ ಮಾಡಲು ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದರು.ನಗರಸಭೆ ಅಧ್ಯಕ್ಷೆ ಚಂಪಾ ಬಿಸಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉದ್ಯಾನವನಕ್ಕೆ ಸಿಂಧೂರ ಉದ್ಯಾನವನ ಅಂತ ನಾಮಕರಣ ಹಾಗೂ ಅಮರ ಜವಾನ್ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ನಿವೃತ್ತ ಯೋಧರ ಸಂಘದ ವತಿಯಿಂದ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಲಾಯಿತು.

ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರೇಶ ಮೋಟಗಿ, ಸಿಪಿಐ ಡಾ.ಶಂಕರ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಗಂಗಮ್ಮ ಹಾವನೂರ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಹನುಮಂತಗೌಡ್ರ, ರಾಮಚಂದ್ರ, ಕೆ.ಎನ್. ಮರಡಿಬಣಕಾರ ಮತ್ತಿತರರಿದ್ದರು.ಕಾರಡಗಿ ವೀರಭದ್ರೇಶ್ವರನಿಗೆ ಬೊಮ್ಮಾಯಿ ಪೂಜೆ

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿರವರ 100ನೇ ಜನ್ಮದಿನದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ತಂದೆಯವರ 100ನೇ ಜನ್ಮದಿನದ ಸವಿನೆನಪಿಗಾಗಿ ಕಾರಡಗಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಪತ್ನಿ ಚನ್ನಮ್ಮ ಬೊಮ್ಮಾಯಿ, ಪುತ್ರ ಭರತ ಬೊಮ್ಮಾಯಿ ಸೇರಿದಂತೆ ಶಿಗ್ಗಾಂವಿ- ಸವಣೂರು ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.