ನರಿಯಂದಡ ಗ್ರಾಮ ಪಂಚಾಯಿತಿ ಕೊಕೇರಿ ಗ್ರಾಮದ ಚೇನಂಡ ಕುಟುಂಬದವರು ಮುಂಬರುವ ಚೇನಂಡ ಕಪ್ ಕೊಡವ ಹಾಕಿ ಪಂದ್ಯಾವಳಿಯ ಪ್ರತಿಯೊಂದು ಗೋಲಿಗೂ ಒಂದು ಗಿಡ ನೆಡುವ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಪೊನ್ನಣ್ಣ ಅತಿಥಿಯಾಗಿ ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡ ನೆಡುವ ಕಾರ್ಯಕ್ರಮದ ಮೂಲಕ ನೆಲ ಜಲ ಸಂರಕ್ಷಣೆಗೆ ಚೇನಂಡ ಕುಟುಂಬಸ್ಥರು ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ಕೊಕೇರಿ ಗ್ರಾಮದ ಚೇನಂಡ ಕುಟುಂಬದವರು ಮುಂಬರುವ ಚೇನಂಡ ಕಪ್ ಕೊಡವ ಹಾಕಿ ಪಂದ್ಯಾವಳಿಯ ಪ್ರತಿಯೊಂದು ಗೋಲಿಗೂ ಒಂದು ಗಿಡ ನೆಡುವ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡಗಿನಲ್ಲಿ ಹಾಕಿ ಉತ್ಸವ ಗಿನ್ನಿಸ್ ದಾಖಲೆ ಮಾಡಿದೆ. ಹಾಕಿ ಕ್ರೀಡೆ ಉತ್ತೇಜನದೊಂದಿಗೆ ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ಈ ಬಾರಿಯ ಹಾಕಿ ಉತ್ಸವ ವಿನೂತನ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಮತ್ತಷ್ಟು ದಾಖಲೆಗಳೊಂದಿಗೆ ಹೊರಹೊಮ್ಮಲಿದೆ. ನ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಗೋ ಬಿಡುಗಡೆ ಮಾಡುವರು ಎಂದ ಅವರು, ಕ್ರೀಡಾಕೂಟಕ್ಕೆ ಅಗತ್ಯ ನೆರವನ್ನು ನೀಡುವುದಾಗಿ ಹೇಳಿದರು.
ಕ್ರೀಡಾ ಸಮಿತಿಯ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಶಾಸಕರೊಂದಿಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷರಾದ ತಮುಣಿ ಕರುಂಬಯ್ಯ, ಕಾರ್ಯದರ್ಶಿ ಮಧು ಮಾದಯ್ಯ, ಸಮಿತಿ ವಕ್ತಾರ ಸುರೇಶ ನಾಣಯ್ಯ, ಕುಟುಂಬದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಪೂಣಚ್ಚ, ಕುಟುಂಬದ ಹಿರಿಯರಾದ ಅಯ್ಯಪ್ಪ, ಜಪ್ಪು ದೇವಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪೆಮ್ಮಂಡ ಕೌಶಿ ಕಾವೇರಮ್ಮ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವಲಯ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಪಕ್ಷದ ವಲಯ ಅಧ್ಯಕ್ಷ ಕೋಡಿಮಣಿಯಂಡ ವಿನೋದ್ ನಾಣಯ್ಯ, ಐತಿಚಂಡ ಪ್ರಕಾಶ್, ಕಲಿಯಂಡ ಸಂಪನ್ ಅಯ್ಯಪ್ಪ, ಪ್ರಕಾಶ್, ಚೇನಂಡ ಕುಟುಂಬಸ್ಥರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.