ಎಲ್ಲಾ ಧರ್ಮದವರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನದಲ್ಲಿದೆ

KannadaprabhaNewsNetwork |  
Published : Dec 02, 2024, 01:15 AM IST
ಚಿತ್ರ 2 | Kannada Prabha

ಸಾರಾಂಶ

ಚಿತ್ರದುರ್ಗ: ಬುದ್ಧರ ಕಾಲದ ಬಿಕ್ಕು ಸಂಘಗಳು ಹಾಗೂ ಬಸವಣ್ಣನವರ ಅನುಭವ ಮಂಟಪ ಭಾರತದ ಸಂಸತ್ತಿನ ಅಡಿಗಲ್ಲುಗಳಾಗಿದ್ದು, ಇವುಗಳು ಯಾವುದೇ ಧರ್ಮ, ಜಾತಿ, ಲಿಂಗ ಹಾಗೂ ಅಂತಸ್ತಿನ ತಾರತಮ್ಯವಿಲ್ಲದೆ ಸಮಾನತಾ ಕೇಂದ್ರಗಳಾಗಿದ್ದವು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ: ಬುದ್ಧರ ಕಾಲದ ಬಿಕ್ಕು ಸಂಘಗಳು ಹಾಗೂ ಬಸವಣ್ಣನವರ ಅನುಭವ ಮಂಟಪ ಭಾರತದ ಸಂಸತ್ತಿನ ಅಡಿಗಲ್ಲುಗಳಾಗಿದ್ದು, ಇವುಗಳು ಯಾವುದೇ ಧರ್ಮ, ಜಾತಿ, ಲಿಂಗ ಹಾಗೂ ಅಂತಸ್ತಿನ ತಾರತಮ್ಯವಿಲ್ಲದೆ ಸಮಾನತಾ ಕೇಂದ್ರಗಳಾಗಿದ್ದವು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಿಧಾನವನ್ನು ಗೌರವಿಸುವುದೆಂದರೇ ಕೈಮುಗಿದು ಪೂಜಿಸುವುದಲ್ಲ ಎಂಬ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದೊಳಗಿನ ಸಾಮಾಜಿಕ ವ್ಯವಸ್ಥೆಯನ್ನು ಒಂದು ಮುಳ್ಳಿನ ಮೊನೆಯಷ್ಟು ಬಿಡದೇ ಅಂಬೇಡ್ಕರ್ ಅವರು ಅಧ್ಯಯನ ಮಾಡಿದ್ದರಿಂದ ಸಂವಿಧಾನದಲ್ಲಿ ಭಾರತದೊಳಗಿನ ಎಲ್ಲಾ ಜಾತಿ, ಧರ್ಮ ಹಾಗೂ ಸಂಸ್ಕೃತಿಗಳ ಜನರ ಹಕ್ಕು ಬಾಧ್ಯತೆಗಳಿಗೆ ಕಿಂಚಿತ್ತು ಧಕ್ಕೆಯಾಗದಂತೆ ರಕ್ಷಿಸಿದ್ದಾರೆ. ನಮ್ಮನ್ನು ಗೌರವಿಸುವಂತಹ ಸಂವಿಧಾನ ಬೇಕೆನ್ನುವ ಸ್ವಾಮೀಜಿಗಳಿಗೆ ಪ್ರಸ್ತುತ ಭಾರತದ ಸಂವಿಧಾನದಲ್ಲಿ ಅವರುಗಳಿಗೆ ಮತ್ತು ಅವರ ಧರ್ಮಕ್ಕೆ ಯಾವ ರೀತಿಯ ತೊಂದರೆಯಾಗಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದರು.

ಎಲ್ಲಾ ಧರ್ಮದವರಿಗೂ ಸಮಾನ ಧಾರ್ಮಿಕ ಸ್ವಾತಂತ್ರ‍್ಯ ನೀಡಿರುವುದು ಸಂವಿಧಾನದ ತಪ್ಪೇ ? ಮುಸಲ್ಮಾನರಿಗೆ ಮತದಾನದ ಹಕ್ಕನ್ನು ತೆಗೆಯಬೇಕೆನ್ನುವ ಸ್ವಾಮೀಜಿಯವರ ಮಾತು ಫ್ಯೂಡಲ್ ಮನಸ್ಥಿತಿಯದ್ದಾಗಿದೆ. ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವವನ್ನು ಕಾಪಾಡುವಂತಹ ಸಂವಿಧಾನವನ್ನು ಭಾರತದ ಪ್ರಜೆಗಳಾದ ನಾವು ನಮಗೆ ಅರ್ಪಿಸಿ ಕೊಂಡಿದ್ದೇವೆ ಎನ್ನುವ ಸಂವಿಧಾನದ ಪೀಠಿಕೆಯ ಮಹತ್ವವನ್ನು ಅರಿಯದಿರುವುದು ದುರದೃಷ್ಟವಾಗಿದೆ. ಈ ಮನಸ್ಥಿತಿ ಹೇಳಿಕೆಗಳು ಭಾರತದ ಐಕ್ಯತೆಗೆ ಧಕ್ಕೆ ತರುತ್ತವೆ ಎಂದರು.

ಸಂವಿಧಾನದ ಮುಂದೆ ಎಲ್ಲಾ ಧರ್ಮಗಳು ಸಮಾನವಾಗಿದ್ದು, ಎಲ್ಲ ಧರ್ಮಗಳ ಜನರ ಹಕ್ಕುಗಳು ಸಮಾನವಾಗಿವೆ. ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ರಕ್ತಪಾತವಿಲ್ಲದೆ ಕ್ರಾಂತಿಕಾರಕ ಬದಲಾವಣೆ ತರುವಂತ ಒಂದು ಪದ್ಧತಿಯ ಆಡಳಿತ ಸ್ವರೂಪವೇ ಪ್ರಜಾಪ್ರಭುತ್ವವಾಗಿದ್ದು, ಅದು ಜೀವಂತವಾಗಿದ್ದರೆ ಅದರ ಫಲವನ್ನು ನಾವೆಲ್ಲರೂ ಅನುಭವಿಸಬಹುದು. ಪ್ರಜಾಪ್ರಭುತ್ವ ಸತ್ತರೆ ನಮ್ಮೆಲ್ಲರ ಸರ್ವನಾಶ ಖಂಡಿತ ಎಂದು ಹೇಳಿದರು.

ಮೂಲಭೂತ ಹಕ್ಕುಗಳೇ ಸಂವಿಧಾನದ ಜೀವಸೆಲೆಯಾಗಿವೆ. ಎಂದಾದರೂ, ಎಲ್ಲಾ ತಲೆಮಾರಿಗೂ, ಕಾಲಘಟ್ಟಕ್ಕೂ ಅನುಕೂಲವಾಗುವಂತೆ ತಿದ್ದುಪಡಿ ಮಾಡಿಕೊಳ್ಳುವ, ಮೂಲಭೂತ ಹಕ್ಕುಗಳಿಗೆ ಎಂದೆಂದೂ ಧಕ್ಕೆಯಾಗದಂತಹ ರೀತಿಯಲ್ಲಿ ಪ್ರಪಂಚವೇ ಮೆಚ್ಚುವಂತಹ ಫ್ಲೆಕ್ಸಿಬಲ್ ಲಿಖಿತ ಸಂವಿಧಾನವನ್ನು ಪಡೆದಿರುವುದು ಭಾರತದ ಪ್ರಬುದ್ಧತೆಯೆಂದೇ ಹೇಳಬಹುದು ಎಂದರು.

ಬಿಎಸ್‌ಐನ ಜಿಲ್ಲಾ ಕಾರ್ಯದರ್ಶಿ ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿ, ಉಪನ್ಯಾಸಕ ಈ.ನಾಗೇಂದ್ರಪ್ಪ, ಹಿಂದೂದರ ಗೌತಮ್, ತಿಪಟೂರು ಮಂಜು, ಬನ್ನಿ ಕೋಡ್ ರಮೇಶ್, ಸಚಿನ್ ಗೌತಮ್, ಜಿಲ್ಲಾ ಖಜಾಂಚಿ ಬೆಸ್ಕಾಂ ತಿಪ್ಪೇಸ್ವಾಮಿ, ಜಿ.ಶಾಂತಮ್ಮ, ಉಷಾ, ತಿಪ್ಪಮ್ಮ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ