ಗದಗ: ಏಪ್ರಿಲ್ 19ರಂದು ಸಮಾನತೆಯ ರಥಯಾತ್ರೆ-ಸಮಾನತೆಯ ಬುತ್ತಿ ಕಾರ್ಯಕ್ರಮ ನಡೆಯಲಿದ್ದು, ಬಸವೇಶ್ವರ ಸರ್ಕಲ್ನಿಂದ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆಯೊಂದಿಗೆ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಅನಿಲ ಮೆಣಸಿನಕಾಯಿ ಹೇಳಿದರು.
ಮುನ್ಸಿಪಲ್ ಮೈದಾನದಲ್ಲಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗುವುದು. ಜೊತೆಗೆ ಎಲ್ಲ ಪಕ್ಷದ ರಾಜಕೀಯ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಹೊಸ ಕಲ್ಪನೆಗೆ ಕೈಜೋಡಿಸಿ ಅಂತ ಮನವಿ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಗ್ರಾ. ಪಂ ಸದಸ್ಯರು, ತಾ.ಪಂ, ಜಿಪಂ ಮಾಜಿ ಸದಸ್ಯರು, ಕ್ರೀಡಾಪಟುಗಳು, ಸಂಘ ಸಂಸ್ಥೆಯ ಮುಖಂಡರು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ರಾಜಕೀಯ ಹೊರತು ಪಡಿಸಿ ಸಮಾನತೆ ಮಂದಿರ ನಿರ್ಮಾಣಕ್ಕೆ ಅಣಿಯಾಗಿದ್ದೇವೆ. ಎಲ್ಲರೂ ಕೈ ಜೋಡಿಸಿ ಶಕ್ತಿ ತುಂಬುವ ಅವಶ್ಯಕತೆ ಇದೆ. ಇದಕ್ಕೆ ಯಾವುದೇ ರಾಜಕಾರಣ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಮುತ್ತಣ್ಣ ಗದುಗಿನ, ಮಂಜುನಾಥ ಮ್ಯಾಗೆರಿ, ಉಡಚಪ್ಪ ಹಳ್ಳಿಕೇರಿ, ವಸಂತ ಪಡಗದ, ಪರಮೇಶ ನಾಯಕ, ಶರಣಪ್ಪ ಚಿಂಚಲಿ, ಉಮೇಶ ಹಡಪದ ಉಪಸ್ಥಿತರಿದ್ದರು.