ಈಶ 5 ಕೃಷಿ ಸಂಸ್ಥೆಗಳಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ

KannadaprabhaNewsNetwork |  
Published : Dec 15, 2024, 02:03 AM IST

ಸಾರಾಂಶ

ಸದ್ಗುರು ಸ್ಥಾಪಿತ ಈಶ ಫೌಂಡೇಶನ್‌ನ ಭಾಗವಾದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಈಶ ಔಟ್‌ರೀಚ್‌ ಬೆಂಬಲಿತ 5 ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒ) ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ನೀಡಿದ ಅಭೂತಪೂರ್ವ ಕೊಡುಗೆಗಳಿಗಾಗಿ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿವೆ.

ಮೈಸೂರು: ಸದ್ಗುರು ಸ್ಥಾಪಿತ ಈಶ ಫೌಂಡೇಶನ್‌ನ ಭಾಗವಾದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಈಶ ಔಟ್‌ರೀಚ್‌ ಬೆಂಬಲಿತ 5 ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒ) ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ನೀಡಿದ ಅಭೂತಪೂರ್ವ ಕೊಡುಗೆಗಳಿಗಾಗಿ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿವೆ.

ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸದ್ಗುರು, ‘ಕೃಷಿಕರ ಆರ್ಥಿಕತೆ ಹಾಗೂ ಪರಿಸರ ಸುಸ್ಥಿರತೆಯ ವರ್ಧನೆಯಲ್ಲಿ ಎಫ್‌ಪಿಒಗಳು ಅತ್ಯುತ್ತಮ ಮಾದರಿಗಳಾಗಿವೆ ಎಂಬುದು ಇದರಿಂದ ಸಾಬೀತಾಗಿದೆ. ಒಬ್ಬ ಭೂಮಾಲೀಕ ಒಬ್ಬಂಟಿಯಾಗಿ ಮಾಡಲು ಸಾಧ್ಯವಾಗದ್ದು ಎಲ್ಲರೂ ಒಗ್ಗೂಡಿದಾಗ ಮಾಡಲು ಸಾಧ್ಯ. ಮುಂಬರುವ ದಿನಗಳಲ್ಲಿ ಕೃಷಿ ಹಾಗೂ ದೇಶದ ಆರ್ಥಿಕತೆಯ ಅಭಿವೃದ್ಧಿ, ಸುಸ್ಥಿರ ಕೃಷಿ ಪದ್ಧತಿಗಳ ಸ್ಥಾಪನೆ, ಮಣ್ಣಿನ ಸಂರಕ್ಷಣೆ, ನೀರು ಹಾಗೂ ಆಹಾರ ಸುರಕ್ಷತೆಯನ್ನು ಸಾಧಿಸುವುದು ನಮ್ಮ ಗುರಿಯಾಗಿದೆ’ ಎನ್ನುತ್ತಾ ಪ್ರಶಸ್ತಿ ವಿಜೇತ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ನಡೆದ ಸಿಐಐ ಎಫ್‌ಪಿಒ ಶೃಂಗಸಭೆಯಲ್ಲಿ ಮಾತನಾಡಿದ ಮಧ್ಯಪ್ರದೇಶ ಎಫ್‌ಪಿಒ ಒಕ್ಕೂಟದ ಸಿಇಒ ಯೋಗೇಶ್ ದ್ವಿವೇದಿ, ‘ಆಧ್ಯಾತ್ಮವನ್ನು ಹೊರತುಪಡಿಸಿ ಈಶ ಸಂಸ್ಥೆ ಕೃಷಿಕರೊಂದಿಗೂ ಕೈಜೋಡಿಸಿದ್ದಾರೆ. ಇದು ಸ್ಫೂರ್ತಿದಾಯಿಕವಾಗಿದ್ದು, ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದರು.

ಈಶ ಔಟ್‌ರೀಚ್‌ನ ಯೋಜನಾ ನಿರ್ದೇಶಕ ವೆಂಕಟ್‌ ರಾಸಾ ಮಾತನಾಡಿ, ‘2013ರಲ್ಲಿ ಸದ್ಗುರು ಅವರ ಮಾರ್ಗದರ್ಶನದಲ್ಲಿ ವೆಲ್ಲಿಯಂಗಿರಿ ಉಝವನ್‌ ಎಫ್‌ಪಿಒ ಅನ್ನು ಆರಂಭಿಸಲಾಗಿತ್ತು. ಇಂದು ತಮಿಳುನಾಡಿನಾದ್ಯಂತ 25 ಎಫ್‌ಪಿಒಗಳು ತಲೆ ಎತ್ತಿವೆ. ಈ ಪ್ರಶಸ್ತಿಯು ರೈತರ ಜೀವನದಲ್ಲಿ ಬದಲಾವಣೆ ತರುವಲ್ಲಿ ಒಗ್ಗಟ್ಟಿನ ಪಾತ್ರದ ಮಹತ್ವವನ್ನು ತೋರಿಸಿದೆ’ ಎಂದರು.

ಪ್ರಶಸ್ತಿ ಪಡೆದ 5 ಎಫ್‌ಪಿಒ:

-ಕರ್ನಾಟಕದ ಪೊನ್ನಾಡ್‌ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ. ಗೆ ನವದೆಹಲಿಯಲ್ಲಿ ನಡೆದ 2024ರ ಸಿಐಐ ಎಫ್‌ಪಿಒ ಶೃಂಗಸಭೆಯಲ್ಲಿ, ಮಾರುಕಟ್ಟೆ ಸಂಪರ್ಕ ವಿಭಾಗದಲ್ಲಿ ‘ಸಿಐಐ ಎಫ್‌ಪಿಒ ಶ್ರೇಷ್ಠ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಡಿಕೇರಿ ಮೂಲದ ಈ ಕಂಪನಿ ಆರ್ಥಿಕ ವರ್ಷ 2023-24ರಲ್ಲಿ 9 ಕೋಟಿ ರು. ವಹಿವಾಟು ನಡೆಸಿದೆ.

-ಕರ್ನಾಟಕದ ತಿಪಟೂರು ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ. ಗೆ ನೇರವಾಗಿ ರೈತರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಚೆನ್ನಾಗಿ ಪ್ಯಾಕ್‌ ಮಾಡಲಾದ ಕೃಷಿ ಉತ್ಪನ್ನಗಳನ್ನು ಒದಗಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್ ಪ್ರಶಸ್ತಿ ನೀಡಿದೆ.

-ತಮಿಳುನಾಡಿನ ವೆಲ್ಲಿಯಂಗಿರಿ ಉಝವನ್ ಕೃಷಿ ಉತ್ಪನ್ನ ಕಂಪನಿಗೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಸಹಯೋಗದಲ್ಲಿ ಕೃಷಿ ಜಾಗರಣ್‌ ಅವತಿಯಿಂದ ‘ಮಿಲಿಯನೇರ್‌ ಫಾರ್ಮರ್‌ ಇನ್‌ ಇಂಡಿಯಾ’ ಪ್ರಶಸ್ತಿ ನೀಡಲಾಯಿತು.

-ತಮಿಳುನಾಡಿನ ನೀಲಗಿರೀಸ್‌ನ ಮಲನಾಡು ಕೃಷಿ ಉತ್ಪಾದಕರ ಕಂಪನಿ ಲಿ. ಕೂಡ ‘ಮಿಲಿಯನೇರ್‌ ಫಾರ್ಮರ್‌ ಇನ್‌ ಇಂಡಿಯಾ’ ಪ್ರಶಸ್ತಿಗೆ ಪಾತ್ರವಾಗಿದೆ.

-ಕೊಯಮತ್ತೂರಿನ ತೆಂಚೇರಿಮಲೈ ಕೃಷಿ ಉತ್ಪಾದಕರ ಕಂಪನಿ ಲಿ. ಅನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್‌) ಆರ್ಥಿಕ ವರ್ಷ 2023-24ರ ಅತ್ಯುತ್ತಮ ಎಫ್‌ಪಿಒ ಎಂದು ಗುರುತಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ