ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕಳೆದ ಮೂರುವರೆ ದಶಕಗಳಿಂದ ನನಗೆ ಮತ್ತು ಆಳ್ವಾಸ್ ಸಂಸ್ಥೆಗೆ ಮೂಡುಬಿದಿರೆ ಹಾಗೂ ನಾಡಿನ ಜನತೆ ನೀಡುತ್ತಿರುವ ತುಂಬು ಹೃದಯದ ಪ್ರೀತಿ ಅಮೂಲ್ಯವಾದದ್ದು. ಇದೇ ಕಾರಣದಿಂದಾಗಿ ಆಳ್ವಾಸ್ ಸಂಸ್ಥೆ ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದಿನ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಮೆಡಿಕಲ್ ಕಾಲೇಜು ಪ್ರಾರಂಭಿಸಲಿದ್ದೇವೆ. ಮಿಜಾರು ಶೋಭಾವನದಲ್ಲಿ ಸೇವೆ ಮಾಡುತ್ತಿರುವ ಮದ್ಯವರ್ಜನ ಹಾಗೂ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು 100 ಬೆಡ್ಗಳೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಘೋಷಿಸಿದ್ದಾರೆ.ಶನಿವಾರ ಸಂಜೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ತಮ್ಮ 73ನೇ ಜನ್ಮದಿನದ ಅಂಗವಾಗಿ ನಡೆದ ‘ಮೋಹನರಾಗ- ನೆನಪುಗಳ ಜೊತೆ ಪಯಣ’ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1981ರಲ್ಲಿ ಪ್ರಾರಂಭವಾದ ಆಳ್ವಾಸ್ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಆಳ್ವಾಸ್ನ 61 ಮಂದಿ ಕ್ರೀಡಾ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 12 ಕ್ರೀಡಾಪಟುಗಳು ಒಲಿಂಪಿಕ್, 32 ವಿದ್ಯಾರ್ಥಿಗಳು ಜಾಗತಿಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಶೈಕ್ಷಣಿಕವಾಗಿಯೂ ಪ್ರತಿ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ದಾಖಲಿಸುತ್ತಲೇ ಇದೆ ಎಂದರು.ಈ ಸಂದರ್ಭ 73 ಮಕ್ಕಳು ವೇದಿಕೆಗೆ ಬಂದು ಗುಲಾಬಿ ಹೂವುಗಳೊಂದಿಗೆ ಆಳ್ವರಿಗೆ ಜನ್ಮದಿನದ ಶುಭಾಶಯ ಕೋರಿ ಸಿಹಿ ಪಡೆದರು. ಪಟ್ಲ ಸತೀಶ್ ಶೆಟ್ಟಿ ಕಂಠ ಸಿರಿಯಲ್ಲಿ ಮೋಹನ ಸಾಧನೆಯ ಗಾನ ಸುಧೆ ವಿಶೇಷವಾಗಿತ್ತು.
ಶಾಸಕ ಉಮಾನಾಥ ಕೋಟ್ಯಾನ್, ಚೌಟರ ಅರಮನೆಯ ಕುಲದೀಪ ಎಂ., ಭಾರತ್ ಸ್ಕೌಟ್ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧಿಯಾ, ಪ್ರಮುಖರಾದ ಡಾ.ಕೆ ಪ್ರಕಾಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಕೆ.ಶ್ರೀಪತಿ ಭಟ್, ಸೀತಾರಾಮ ಆಳ್ವ, ಬಾಲಕೃಷ್ಣ ಆಳ್ವ, ಮೀನಾಕ್ಷಿ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಸುರೇಶ್ ಭಂಡಾರಿ ಕಡಂದಲೆ, ಮಿಜಾರುಗುತ್ತು ಶ್ರೀನಿವಾಸ ಆಳ್ವ, ಕೆ.ಪಿ.ಜಗದೀಶ ಅಧಿಕಾರಿ, ಕೆ. ಕೃಷ್ಣರಾಜ ಹೆಗ್ಡೆ ಭಾರೀ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಿ ಡಾ. ಆಳ್ವರಿಗೆ ಶುಭ ಕೋರಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.