ಕನ್ನಡಪ್ರಭ ವಾರ್ತೆ ಮಂಡ್ಯ
ಟ್ರಸ್ಟ್ ಆ್ಯಕ್ಟ್ ಕಾಯಿದೆಯಡಿ ಕರ್ನಾಟಕ ಸರ್ಕಾರದ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಟ್ರಸ್ಟ್ನ ೩೨ ಮಂದಿ ಪದಾಧಿಕಾರಿಗಳ ಸಮಿತಿಯೊಂದಿಗೆ ನೋಂದಾಯಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗೌರವಾಧ್ಯಕ್ಷರು, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುರುಷರ ಮೇಲೆ ಕೆಲವು ಮಹಿಳೆಯರಿಂದ ನಡೆಯುವ ದೌರ್ಜನ್ಯ, ಒತ್ತಡ, ಮಾನಸಿಕ ಮತ್ತು ದೈಹಿಕ ಹಲ್ಲೆ, ವರದಕ್ಷಿಣೆ ಸಂಬಂಧ ಸುಳ್ಳು ದೂರು, ಕೊಲೆಯತ್ನ, ಅಪಹರಣ ಮಾಡುವುದು ಹಾಗೂ ಇತರೆಲ್ಲಾ ದೌರ್ಜನ್ಯಗಳ ವಿರುದ್ಧ ಸಮಿತಿಯು ಕಾನೂನು ಸಲಹೆ, ಸಹಾಯ, ಸಹಕಾರ, ಮಾರ್ಗದರ್ಶನ, ಆಪ್ತ ಸಮಾಲೋಚನೆ, ಪರಸ್ಪರ ಚರ್ಚೆ, ಮಹಿಳೆ ಮತ್ತು ಪುರುಷನ ನಡುವಿನ ಭಿನ್ನಾಭಿಪ್ರಾಯ, ಕೋಪ- ತಾಪಗಳನ್ನು, ಪರಸ್ಪರ ಮನಸ್ತಾಪಗಳನ್ನು ಹೋಗಲಾಡಿಸಿ ಸಂಸಾರ ಉತ್ತಮ ರೀತಿಯಲ್ಲಿ ನಡೆಯುವಂತೆ ಪ್ರೇರಣೆ- ಪ್ರೋತ್ಸಾಹ ನೀಡುವುದು ಟ್ರಸ್ಟ್ನ ಮೂಲ ಉದ್ದೇಶವಾಗಿದೆ.ರಾಷ್ಟ್ರೀಯ ಮಹಿಳಾ ಆಯೋಗ ಇರುವ ಮಾದರಿಯಲ್ಲೇ ರಾಷ್ಟ್ರೀಯ ಪುರುಷ ಆಯೋಗವನ್ನೂ ರಚನೆ ಮಾಡಿ ನೊಂದ ಪುರುಷರೂ ನ್ಯಾಯ ಪಡೆಯುವುದಕ್ಕೆ ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಬೇಕು. ಆಯೋಗ ರಚನೆಯಲ್ಲೂ ಸಮಾನತೆ ಕಾಪಾಡುವ ಅಗತ್ಯವಿದೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಪುರುಷರ ಪರವಾಗಿ ಟ್ರಸ್ಟ್ ಎಂದಿಗೂ ನಿಲ್ಲುವುದಿಲ್ಲ. ಸತ್ಯಾಸತ್ಯತೆಯನ್ನು ವಿಚಾರಿಸಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಜೀವನ ನಡೆಸುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನಿಸಲಾಗುವುದು ಎಂದರು.
ಯಾರ ವಿರುದ್ಧವೇ ಆಗಲಿ, ದೂರು ದಾಖಲಾದ ತಕ್ಷಣವೇ ಎಫ್ಐಆರ್, ಬಂಧನಕ್ಕೊಳಪಡಿಸದೆ ಸತ್ಯಾಸತ್ಯತೆ ಪರಿಶೀಲಿಸಿ, ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಅದರಂತೆ ಪೊಲೀಸ್ ಅಧಿಕಾರಿಗಳು ನಡೆಯುತ್ತಿಲ್ಲ. ದೂರು ಬಂದ ಕೂಡಲೇ ಹಿಂದೆ- ಮುಂದೆ ವಿಚಾರಿಸದೆ, ಪರಿಶೀಲನೆಯನ್ನೂ ನಡೆಸುವ ಗೋಜಿಗೆ ಹೋಗದೆ ಅಮಾಯಕರನ್ನು ಬಂಧಿಸಲಾಗುತ್ತಿದೆ. ಹೆಣ್ಣಿನ ರಕ್ಷಣೆ ಹೆಸರಿನಲ್ಲಿ ಪುರುಷರು ಕಿರುಕುಳ, ನೋವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಪುರುಷರ ಹಿತರಕ್ಷಣಾ ಟ್ರಸ್ಟ್ ಪುರುಷರು ಮತ್ತು ಮಹಿಳೆಯರ ಮಧ್ಯೆ ಕೊಂಡಿಯಾಗಿ, ಸೇತುವೆಯಾಗಿ ಇಬ್ಬರ ನಡುವಿನ ಮನಸ್ತಾಪಗಳನ್ನು ತಡೆಗಟ್ಟಿ ರಾಜಿ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು. ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸುವುದು ಮುಖ್ಯ ಗುರಿಯಾಗಿದೆ ಎಂದು ಹೇಳಿದರು.