ಬಂಡಾಯ ಪಿತಾಮಹ ರೇಣುಕಾಚಾರ್ಯಗೂ ಉಚ್ಚಾಟಿಸಿ

KannadaprabhaNewsNetwork |  
Published : Mar 28, 2025, 12:31 AM IST
27ಕೆಡಿವಿಜಿ1-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಎಂ.ಆರ್.ಮಹೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಉಚ್ಚಾಟಿಸಿದಂತೆ ರಾಜ್ಯ ಬಿಜೆಪಿಯ ಬಂಡಾಯದ ಪಿತಾಮಹ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೂ ಪಕ್ಷದ ರಾಜ್ಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರು ಉಚ್ಚಾಟಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ, ಹೊನ್ನಾಳಿಯ ಶಾಂತರಾಜ ಪಾಟೀಲ ಒತ್ತಾಯಿಸಿದ್ದಾರೆ.

- ವಿಜಯಪುರ ಶಾಸಕರ ಉಚ್ಚಾಟನೆಯಿಂದ ಬಿಜೆಪಿಗೆ ಹಾನಿ ಸಾಧ್ಯತೆ: ಶಾಂತರಾಜ ಪಾಟೀಲ ಹೇಳಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಉಚ್ಚಾಟಿಸಿದಂತೆ ರಾಜ್ಯ ಬಿಜೆಪಿಯ ಬಂಡಾಯದ ಪಿತಾಮಹ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೂ ಪಕ್ಷದ ರಾಜ್ಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರು ಉಚ್ಚಾಟಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ, ಹೊನ್ನಾಳಿಯ ಶಾಂತರಾಜ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್‌ ಅವರ ಉಚ್ಚಾಟನೆಯು ಬಿಜೆಪಿ ನಿಷ್ಠಾವಂತರು, ಹಿರಿಯ ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಿದೆ. ಪಕ್ಷದ ರಾಷ್ಟ್ರೀಯ ನಾಯಕರು, ರಾಷ್ಟ್ರೀಯ ಶಿಸ್ತುಪಾಲನಾ ಸಮಿತಿ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಿದ ಕ್ರಮದ ಬಗ್ಗೆ ಪುನಃ ಪರಿಶೀಲಿಸಬೇಕು ಎಂದರು.

ಯತ್ನಾಳ್ ಪಕ್ಷದಲ್ಲಿ ಇಲ್ಲದಿದ್ದರೆ ಸಾಕಷ್ಟು ಹಾನಿ ಪಕ್ಷಕ್ಕೂ ಆಗಲಿದೆ. ಬೂತ್ ಮಟ್ಟದ ಕಟ್ಟಕಡೆಯ ಕಾರ್ಯಕರ್ತರೂ ಇಂತಹ ನಿರ್ಧಾರದಿಂದ ಸಾಕಷ್ಟು ವಿಚಲಿತರಾಗಿದ್ದಾರೆ. ಯತ್ನಾಳ್‌ ಅವರ ಉಚ್ಚಾಟನಾ ತೀರ್ಮಾನ ಪುನರ್ ಪರಿಶೀಲನೆಯಾಗಬೇಕು. ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಕಲ್ಪನೆ ಕೊಟ್ಟು, ಬಂಡಾಯದ ಪಿತಾಮಹನಾದ ರೇಣುಕಾಚಾರ್ಯ ಅವರಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗಿದೆ. ಇಂತಹ ರೇಣುಕಾಚಾರ್ಯ ಅವರಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಆಗ್ರಹಿಸಿದರು.

ಎ.ಬಿ.ಹನುಮಂತಪ್ಪ ಅರಕೆರೆ ಮಾತನಾಡಿ, ರಾಜ್ಯ ಬಿಜೆಪಿಯ ಇಂದಿನ ದುಸ್ಥಿತಿಗೆ ಕಾರಣೀಭೂತ ವ್ಯಕ್ತಿಯೆಂದರೆ ಅದು ರೇಣುಕಾಚಾರ್ಯ. ಬಂಡಾಯದ ಹರಿಕಾರನೆಂದು ಕುಖ್ಯಾತ ರೇಣುಕಾಚಾರ್ಯರನ್ನು ರಾಜ್ಯ ಶಿಸ್ತು ಪಾಲನಾ ಸಮಿತಿಯು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ, ಪಕ್ಷದ ಶಿಸ್ತನ್ನು ಎತ್ತಿಹಿಡಿಯಬೇಕಿತ್ತು. ಪದೇಪದೇ ಮಾಧ್ಯಮಗಳ ಮುಂದೆ ಹರಕಥೆಯ ದಾಸರಂತೆ ಸದಾ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತ, ನಗೆಪಾಟಲು ಮಾಡುತ್ತಿದ್ದ, ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಾ ತಿರುಗುವ ರೇಣುಕಾಚಾರ್ಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಾಧ್ಯಮಗಳ ಮುಂದೆ ರಾಷ್ಟ್ರೀಯ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದ್ದು ಸಂತೋಷವಾಗಿದೆ ಎನ್ನುವ ಮೂಲಕ ಕಳಂಕಿತ ಪರಂಪರೆಗೆ ರೇಣುಕಾಚಾರ್ಯ ಮುನ್ನುಡಿ ಬರೆದಿದ್ದಾರೆ. ತಕ್ಷಣವೇ ರೇಣುಕಾಚಾರ್ಯಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕು. ಆ ಮೂಲಕ ರಾಜ್ಯದಲ್ಲಿ ಪಕ್ಷ ಗೌರವ ಉಳಿಸಬೇಕು. ಕಾಂಗ್ರೆಸ್ಸಿನ ಸಚಿವರು, ಮುಖಂಡರನ್ನು ಭೇಟಿ ಮಾಡುತ್ತಾ, ತಮ್ಮ ಕುಟುಂಬ ಸದಸ್ಯರ ಬಿಲ್ ಮಂಜೂರು ಮಾಡಿಸುತ್ತ, ಪಕ್ಷಕ್ಕೂ ಮುಜುಗರ ಮಾಡುವ ಕೆಲಸವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡಿದರೂ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಪಂಚ ಭರವಸೆಗಳ ಮೂಲಕ ರಾಜ್ಯದ ಆರ್ಥಿಕತೆಯನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದೆ. ಈ ಪರಿಸ್ಥಿತಿಯಲ್ಲಿ ಸಂಘಟಿತ ಹೋರಾಟದ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ರೂಪಿಸುವಲ್ಲಿ ವಿಫಲವಾಗಿದೆ. ಇದು ಸರಿಯಲ್ಲ. 2025ರಲ್ಲಿ ಪ.ಪಂ., ಪುರಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ., ಸಹಕಾರ ಕ್ಷೇತ್ರ, ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಇಂತಹ ಚುನಾವಣೆ ಹೊಸ್ತಿಲಲ್ಲಿ ಎಲ್ಲರನ್ನೂ ಕೂಡಿಸಿಕೊಂಡು, ಗೊಂದಲ ಸರಿಪಡಿಸುವ ಬದಲಿಗೆ ಉಚ್ಚಾಟನೆಯಂತಹ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದರು.

ಪಕ್ಷದ ಮುಖಂಡರಾದ ಎಂ.ಆರ್. ಮಹೇಶ, ಮಾಸಡಿ ಸಿದ್ದೇಶ, ನೆಲಹೊನ್ನೆ ದೇವರಾಜ, ಕೆ.ವಿ.ಚನ್ನಪ್ಪ, ರಾಜಣ್ಣ ಇತರರು ಇದ್ದರು.

- - -

-27ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಎಂ.ಆರ್.ಮಹೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ