ಕನ್ನಡಪ್ರಭ ವಾರ್ತೆ ಕೋಲಾರಈ ವರ್ಷ ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಬಹುತೇಕ ಎಲ್ಲಾ ಕೆರೆಗಳು ತುಂಬಿಕೊಂಡಿವೆ. ಅಂತರಜಲ ಮಟ್ಟವೂ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಕೆರೆಗಳ ನೀರು ಕೆಳಭಾಗದ ಇಳಿಜಾರು ಪ್ರದೇಶಗಳಿಗೆ ಕಳೆದ ೨೦ ವರ್ಷದಿಂದ ಹರಿಯದಿರುವ ಕಾರಣ ಕೃಷಿ ಭೂಮಿಗೆ ನೀರು ಸಿಗುತ್ತಿಲ್ಲ.ಇದಕ್ಕೆ ಮುಖ್ಯ ಕಾರಣ ಸಣ್ಣ ನೀರಾವರಿ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ಯೋಜಿತ ನೀರಾವರಿ ವ್ಯವಸ್ಥೆ. ನೀರು ಕೆರೆಗಳಲ್ಲಿ ಸಂಗ್ರಹವಾಗಿದ್ದರೂ ಕೆರೆ ಕೆಳಗಿನ ಜಮೀನುಗಲಿಗೆ ಹರಿಯುವುದೇ ಇಲ್ಲ. ಇದರಿಂದ ಕೆರೆಯ ಕೆಳಭಾಗದ ಸಾವಿರಾರು ಎಕರೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತವಾಗಿದೆ. ಜಿಲ್ಲೆಯಲ್ಲಿ ೨೫೦೦ಕ್ಕೂ ಹೆಚ್ಚು ಕೆರೆ
ಕೋಲಾರ ಜಿಲ್ಲೆಯಾದ್ಯಂತ ಸುಮಾರು ೨೫೦೦ಕ್ಕೂ ಹೆಚ್ಚು ಕೆರೆಗಳಿದ್ದು ಇವುಗಳ ಅಡಿಯಲ್ಲಿ ಸುಮಾರು ೨.೫ ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿ ವ್ಯಾಪಿಸಿದೆ. ಹಿಂದಿನ ದಿನಗಳಲ್ಲಿ ಈ ಕೆರೆಗಳ ನೀರಿನಿಂದ ರೈತರು ಭತ್ತ, ಕಬ್ಬು, ರಾಗಿ, ಹುರುಳಿ, ತರಕಾರಿ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಳೆದ ೨೦ ವರ್ಷದಿಂದ ಕೆರೆಗಳಿಂದ ನೀರು ಬಿಡದ ಪರಿಣಾಮ ಕೆರೆ ಮತ್ತು ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ನಿರಂತರ ನೀರಿನ ಹರಿವು ಇಲ್ಲದ ಕಾರಣ ಅಕ್ಕ ಪಕ್ಕದ ಜಮೀನುಗಳವರು ಕಾಲುವೆಗಳನ್ನು ಮುಚ್ಚಿದ್ದಾರೆ, ಇದರಿಂದಾಗಿ ನೀರಿನ ಹರಿವಿಗೆ ತಡೆಯಾಗಿರುವುದರಿಂದ ನೀರಾವರಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.ಭತ್ತ ಮತ್ತು ಕಬ್ಬಿನಂತಹ ಧೀರ್ಘಾವಧಿಯ ಬೆಳೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಮೀನುಗಾರಿಕೆ ಸಹ ಸ್ಥಗಿತಗೊಂಡಿದೆ. ಕೆರೆ ಕೆಳಗಿನ ಜಮೀನುಗಳಲ್ಲಿ ಕಸ, ಮುಳ್ಳು ಗಿಡಗಳು, ಗಂಟೆಗಳು ಇದರೊಂದಿಗೆ ಜೊಂಡು ಗಿಡಗಳು ವ್ಯಾಪಕವಾಗಿ ಬೆಳೆಯುವುದರ ಮೂಲಕ ರೈತರು ತಮ್ಮ ಜಮೀನುಗಳನ್ನು ಕೃಷಿಗೆ ಬಳಸಿಕೊಳ್ಳಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ನಗರಕ್ಕೆ ಗ್ರಾಮೀಣರ ವಲಸೆಎತ್ತರ ಪ್ರದೇಶದ ಜಮೀನುಗಳಲ್ಲಿ ವ್ಯವಸಾಯ ಮಾಡಲು ಹೆಚ್ಚಿನ ಬಂಡವಾಳದ ಅಗತ್ಯವಿದ್ದು, ಅದರ ಕೊರತೆಯಿಂದ ಅನೇಕ ರೈತರು ತಮ್ಮ ಊರನ್ನು ಬಿಟ್ಟು ಬೆಂಗಳೂರಿನಂತಹ ಮಹಾನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ, ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಕುಗ್ಗುತ್ತಿದ್ದು, ಸ್ಥಳೀಯ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ.ಇದೇ ಸ್ಥಿತಿ ಕೋಲಾರ ಜಿಲ್ಲೆಯಲ್ಲಿ ಮುಂದುವರಿದರೆ ಜಿಲ್ಲೆಯಲ್ಲಿ ಕೃಷಿಕರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಸರ್ಕಾರ ಕೆರೆಯ ನೀರನ್ನು ರೈತರ ಹೊಲಗಳಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರೆ ಕೃಷಿಗೆ ಜೀವ ಬಂದಂತಾಗುತ್ತದೆ. ಕೆರೆ ಮತ್ತು ಕಾಲುವೆಗಳ ಹೂಳನ್ನು ತೆರವುಗೊಳಿ ಸಣ್ಣ ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆ ವೈಜ್ಞಾನಿಕ ನೀರಾವರಿ ಯೋಜನೆ ರೂಪಿಸಿ, ಕೆರೆಗಳ ನಿರ್ವಹಣೆಗೆ ಸ್ಥಳೀಯ ಸಮಿತಿಗಳನ್ನು ಬಲಪಡಿಸಬೇಕೆಂಬುದು ರೈತರ ಆಗ್ರಹವಾಗಿದೆ.
ಕೆರೆಗಳು ಆರ್ಥಿಕ ಜೀವನಾಡಿಈ ಕುರಿತು ಪರಿಸರ ತಜ್ಞರು ಹೇಳುವಂತೆ, ಕೋಲಾರದ ಕೆರೆಗಳು ಕೇವಲ ನೀರಿನ ಸಂಗ್ರಹಣೆ ಕೇಂದ್ರಗಳಷ್ಟೇ ಅಲ್ಲ. ಅವು ಆರ್ಥಿಕ ಜೀವನಾಡಿಯಂತಿವೆ. ಕೆರೆ ನೀರಿನ ಸರಿಯಾದ ಹರಿವು, ಮೀನುಗಾರಿಕೆ ಮತ್ತು ಕೃಷಿ ಪುನರುಜ್ಜೀವನಕ್ಕೆ ಕ್ರಮ ಕೈಗೊಂಡರೆ ರೈತರ ಬದುಕು ಹಸನಾಗಲಿದೆ. ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿರುವ ಕೋಡಿಕಣ್ಣೂರು ಕೆರೆಗೆ ನೀರು ಬಂದಿದ್ದರೂ ಜೊಂಡು ಸಸ್ಯಗಳು ಬೆಳೆಯುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಉಪಯೋಗಬಾರದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೋಲಾರ ನಗರದ ಪ್ರದೇಶದ ಮಾಂಸದ ಅಂಗಡಿ ಮಾಲೀಕರು ಸತ್ತ ಪ್ರಾಣಿಗಳ ತ್ಯಾಜ್ಯ ಮಾಂಸವನ್ನು ಕೆರೆಯಂಗಳದಲ್ಲಿ ಸುರಿಯುವುದರಿಂದ ಮಳೆಯಿಂದ ಕೆರೆಗೆ ಬಂದಿರುವ ಅಲ್ಪಸ್ವಲ್ಪ ನೀರು ಸಹ ಕಲುಷಿತವಾಗುತ್ತಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.