ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪ್ರಸ್ತುತ ಸರ್ಕಾರದಲ್ಲಿರುವ ಹಲವು ಯೋಜನೆಗಳು ಮತ್ತು ಕಾನೂನುಗಳು ಮಹಿಳೆಯರ ಸಬಲೀಕರಣಕ್ಕೆ ಮತ್ತು ಸಮಾನತೆಗೆ ಪೂರಕವಾಗಿವೆ ಎಂದು ಮೈಸೂರಿನ ಕರ್ನಾಟಕ ಮುಕ್ತ ಗಂಗೋತ್ರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ ಆರ್.ಎಚ್. ಪವಿತ್ರಾ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜು ಆವರಣದಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಇಂದಿಗೂ ಸಹ ಸಾಧ್ಯವಾಗಿಲ್ಲ, ಒಬ್ಬ ಮಹಿಳೆ ನಿರ್ಭೀತಿಯಿಂದ ಓಡಾಡಲು ಇಂದಿಗೂ ಸಹ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಸ್ತುತ ಭಾರತದಲ್ಲಿ ಶೇ. 86 ರಷ್ಟು ಪುರುಷರು ಮತ್ತು ಶೇ. 68ರಷ್ಟು ಮಹಿಳೆಯರು ಅಕ್ಷರವಂತರಿದ್ದಾರೆ, ಇಂತಹ ತಾರತಮ್ಯದ ವಿರುದ್ಧ ಹೋರಾಡಿ ಆ ಮಹಿಳೆಯರಿಗೂ ಸಹ ಶಿಕ್ಷಣದ ಅವಶ್ಯಕತೆಯನ್ನು ಪೂರೈಸಬೇಕು ಎಂದರು.
ಟಿ. ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ. ರೇಷ್ಮ ಚಂಗಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆ ಕೆಲಸಕ್ಕೆ ತೆರಳುತ್ತಿರುವ ಸ್ಥಳಗಳಿಲ್ಲಿಯೂ ಸಹಮಹಿಳೆಯರಿಗೆ ದೌರ್ಜನ್ಯ ಎಗ್ಗಿಲ್ಲದೇ ನಡೆಯುತ್ತಿವೆ ಎಂದು ಹೇಳಿದರು.ಇವುಗಳಲ್ಲಿ ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ, ಮತ್ತೆ ಕೆಲವು ಪ್ರಕರಣಗಳು ಬೆಳಕಿಗೆ ಬಾರದ ಸ್ಥಿತಿ ಎದುರಾಗಿದೆ.
ಭೈರಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಎಂ. ನೇತ್ರಾವತಿ ಮಾತನಾಡಿ, ಸದೃಢ ಸಮಾಜ ಕಟ್ಟಬೇಕಾದರೆ ಹೆಣ್ಣು ಗಂಡೆನ್ನದೇ ಭೇದ ಭಾವ ಮರೆತು ಶ್ರಮಿಸಿದಾಗ ಸದೃಡ ಸಮಾಜ ನಿರ್ಮಾಣವಾಗಲಿದೆ ಎಂದರು.ನೂರೈದನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಹೆಬ್ಬಲಗುಪ್ಪೆ ಗ್ರಾಮದ ನಗ್ಮಾ, ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಎನ್.ಸಿ.ಸಿ ವಿದ್ಯಾರ್ಥಿನಿ ಪ್ರಿಯಾಂಕ, ವಿಶ್ವವಿದ್ಯಾಲಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಚಂದನ, ಎನ್.ಎಸ್.ಎಸ್. ನ ರಾಜ್ಯಮಟ್ಟದ ಶಿಬಿರದಲ್ಲಿ ಭಾಗವಹಿಸಿದ ಚೈತ್ರ, ವಲಯ ಮಟ್ಟದ ಪಥ ಸಂಚಲನದಲ್ಲಿ ಭಾಗಿಯಾದ ಶರಣ್ಯ, ಜೀವನ್ ಅವರನ್ನು ಅಭಿನಂದಿಸಲಾಯಿತು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎನ್. ವೆಂಕಟೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭೈರೇಗೌಡ, ಉಪನ್ಯಾಸಕರಾದ ಅವೀನಾ, ಡಿ.ಚಂದನ, ಸಿ.ಚಿತ್ರ, ಬಿ. ಚಿಕ್ಕದೇವಿ, ಸಂಗೀತಾ ಗೌಡ, ಶಾಂಭವಿ, ಮುಖಂಡ ಭಾಸ್ಕರ್, ಪತ್ರಕರ್ತರ ಸಂಘದ ಅಧ್ಯಕ್ಷ ಕಬಿನಿ ಮಂಜು, ಕುಮಾರ್, ಕಲ್ಲೇಶ್ ಗೌಡ, ಚನ್ನಕೇಶವ, ರಾಮಚಂದ್ರ, ಅಂಕಪ್ಪ, ಕ್ರೀಡಾ ಕಾರ್ಯದರ್ಶಿ ಬಿ.ಸಿ. ಮಹೇಂದ್ರ, ಸಿದ್ದೇಗೌಡ, ಮಂಜು, ಮಹದೇವು, ಸಿದ್ದಾರಾಜು, ಪ್ರಕಾಶ್ ಇದ್ದರು.