ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಿ

KannadaprabhaNewsNetwork |  
Published : Apr 24, 2025, 12:06 AM IST
(ಫೋಟೋ 22ಬಿಕೆಟಿ2, ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದ ಜಿಲ್ಲಾ ಹಿರಿಯ ದಿವಾನಿ ನ್ಯಾಯಾಧೀಶರಾದ ಚಂದ್ರಶೇಖರ ಡಿ.ಪಿ) | Kannada Prabha

ಸಾರಾಂಶ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಾಹನ ದಟ್ಟಣೆಯಿಂದ ಸಂಚಾರಿ ವ್ಯವಸ್ಥೆ ಸುಧಾರಿಸಲು ಮೋಟಾರು ವಾಹನ ಕಾಯಿದೆ ಜಾರಿಗೆ ತರಲಾಗಿದೆ. ಈ ಕಾಯಿದೆ ಅಡಿಯಲ್ಲಿ ನಿಯಮ ಪಾಲನೆ ಅವಶ್ಯವಾಗಿದ್ದು, ವಾಹನ ಚಲಾಯಿಸಲು ಚಾಲನೆ ಪರವಾನಗಿ ಮತ್ತು ಇನ್ಶೂರೆನ್ಸ್ ಪಾಲಸಿ ಪಡೆದುಕೊಳ್ಳಬೇಕು ಮತ್ತು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಡಿ.ಪಿ. ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನವನಗರದ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಹನ ಕಾಯ್ದೆ ಮತ್ತು ಸಂಚಾರಿ ನಿಯಮಗಳ ಕುರಿತು ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು. ಆಧಾರ್‌ ಕಾರ್ಡ್‌ ಬರುವ ಪೂರ್ವದಲ್ಲಿ ಲೈಸೆನ್ಸ್ ಪ್ರತಿಯೊಂದು ಕೆಲಸಕ್ಕೂ ಅಧಿಕೃತ ದಾಖಲಾತಿಯಾಗಿ ಬಳಸಲಾಗುತ್ತಿತ್ತು. ಲೈಸೆನ್ಸ್ ಗಳಲ್ಲಿ ಬೇರೆ ಬೇರೆ ವಿಧಗಳಿದ್ದು, ವಾಹನದ ಗಾತ್ರ ಮತ್ತು ಅದರ ಸೇವೆ ಆಧಾರದ ಮೇಲೆ ವಿಂಗಡನೆ ಮಾಡಲಾಗಿದೆ. ಭ್ರಷ್ಟಾಚಾರ ತಡೆಯಲು ಆನ್‌ಲೈನ್ ಮೂಲಕ ಲೈಸೆನ್ಸ್ ಪಡೆಯಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಚಾರಿ ಭದ್ರತೆಗೆ ವಾಹನವಿರುವ ಪ್ರತಿಯೊಬ್ಬರೂ ಇನ್ಶೂರೆನ್ಸ್ ಮಾಡಿಸುವುದು ಅವಶ್ಯಕವಾಗಿದೆ. ಇದರಿಂದ ವಾಹನ ಅವಘಡಗಳಿಂದಾಗುವ ಆರ್ಥಿಕ ಸಂಕಷ್ಟದದಿಂದ ಹೊರಬರಲು ಸಹಾಯಕ. ಸಾರ್ವಜನಿಕ ಮತ್ತು ಖಾಸಗಿ ಎಂದು ಎರಡು ಮಾದರಿ ಇನ್ಸೂರೆನ್ಸ್ ಗಳಿದ್ದು ಪ್ಯಾಕೇಜ್ ಮತ್ತು ಪಾಲಿಸಿಗಳನ್ನು ಇದರಲ್ಲಿ ಕಾಣುತ್ತೇವೆ. ಪ್ಯಾಕೇಜ್ ಪಾಲಸಿಯಲ್ಲಿ ಚಾಲಕ ಮತ್ತು ಸಂಚಾಲಕರಿಗೂ ಪರಿಹಾರ ನೀಡಿದರೆ, ಪಾಲಸಿಯಲ್ಲಿ ಕೇವಲ ಚಾಲಕರಿಗೆ ಮಾತ್ರ ಪರಿಹಾರ ನೀಡಲಾಗಲಿದೆ. ಇವುಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ಸಂಚಾರಿ ಪೊಲೀಸ್ ಪೇದೆ ಆನಂದ ಹಿರೇಗೌಡರ ಮಾತನಾಡಿ, ಸಂಚಾರದಲ್ಲಿ ರಸ್ತೆ ಸುರಕ್ಷಾ ನಿಯಮ ಪಾಲನೆ ಅತ್ಯವಶ್ಯಕ. ಕೇವಲ ವಾಹನ ಚಾಲಕರು ಮಾತ್ರವಲ್ಲದೆ ಪಾದಚಾರಿಗಳು ಕೂಡ ನಿಯಮಗಳನ್ನು ಪಾಲಿಸಬೇಕು. ರಾಜ್ಯದಲ್ಲಿ ಅಪಘಾತದಿಂದ ಪ್ರತಿದಿನ 40 ರಿಂದ 50 ಜನ ಮರಣ ಹೊಂದುತ್ತಿದ್ದು, ಇದಕ್ಕೆ ಬೇಜವಾಬ್ದಾರಿ ಕಾರಣವಾಗಿದೆ. ಕುಡಿದು, ಮೊಬೈಲ್ ಅಲ್ಲಿ ಮಾತನಾಡುತ್ತ ವಾಹನ ಚಲಾಯಿಸುವುದನ್ನು ಬಿಡಬೇಕು. ಅಪಘಾತದಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚಾಗಿದ್ದು, ಹೆಲ್ಮೆಟ್ ಧಾರಣೆ ರೂಢಿಸಿಕೊಳ್ಳಬೇಕು. ಹೆಚ್ಚುತ್ತಿರುವ ವಾಹನ ದಟ್ಟಣೆಯಲ್ಲಿ ಅಪಘಾತ ನಿಯಂತ್ರಣ ಸಾಧ್ಯವಿಲ್ಲ. ಆದರೆ ಜೀವಹಾನಿ ತಡೆಯಲು ಸಾಧ್ಯ. ನಿಯಮ ಪಾಲನೆ ಜೀವಗಳ ರಕ್ಷಣೆಗೆ ಹೊರತು ಅದೊಂದು ಶಿಕ್ಷೆಯಲ್ಲ ಎಂದು ಹೇಳಿದರು.

ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಮಾತನಾಡಿ, ರಸ್ತೆಗಳಿಲ್ಲದೆ ಜೀವನವಿಲ್ಲ, ಆದರೆ ರಸ್ತೆಗಳು ಸಾವನ್ನು ಹೊತ್ತು ತರುವ ಏಜೆಂಟ್ ಗಳಾಗಿವೆ. ಸಂಚಾರಿ ನಿಯಮಗಳ ಅರಿವು ಇಲ್ಲದಿರುವುದು ಇದಕ್ಕೆ ಕಾರಣ. ವಾಹನ ಚಾಲಕನಿಗೆ ಮಾನಸಿಕ ಮತ್ತು ದೈಹಿಕ ಸಂಯಮತೆ ಅವಶ್ಯಕ. ದುಃಖ, ಸಂತೋಷ, ಭಾವೋದ್ರೇಕತೆ, ಅವಸರಗಳನ್ನು ಹತೋಟಿಯಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಅಜ್ಞಾನಕ್ಕೆ ಕ್ಷಮೆಯಿಲ್ಲ, ಜ್ಞಾನದಿಂದ ಜೀವ ರಕ್ಷಣೆ ಸಾಧ್ಯ. ಪೊಲೀಸರಿಂದ ಪಾರಾಗಲು ನಿಯಮ ಪಾಲಿಸದೇ ಜೀವ ರಕ್ಷಣೆಗಾಗಿ ಸಾಧನ ಬಳಸಿ. ರಸ್ತೆ ಅಗಲೀಕರಣದಿಂದ ಅಪಘಾತ ತಡೆಯಲು ಸಾಧ್ಯವಿಲ್ಲ. ರಸ್ತೆ ಉತ್ತಮವಿದ್ದಷ್ಟು ವೇಗದ ಚಾಲನೆ ಮಾಡಬೇಕೆಂಬ ಮನಸ್ಥಿತಿ ಇದೆ. ವೇಗ ಮಿತಿಯಲ್ಲಿರಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ