ಪ್ರತಿಯೊಬ್ಬರೂ ಅಂಬೇಡ್ಕರ್‌ ತತ್ವಾದರ್ಶ ಅಳವಡಿಸಿಕೊಳ್ಳಿ

ದಲಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿಬೇಕಿದ್ದು, ಉನ್ನತ ಪದವಿ ಪಡೆದು ಸಮಾಜದಲ್ಲಿ ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು.

KannadaprabhaNewsNetwork | Published : Apr 27, 2024 7:45 PM IST

ಕನ್ನಡಪ್ರಭ ವಾರ್ತೆ ಶಿರಾದಲಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿಬೇಕಿದ್ದು, ಉನ್ನತ ಪದವಿ ಪಡೆದು ಸಮಾಜದಲ್ಲಿ ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು. ಅಂಬೇಡ್ಕರ್ ಆಶಯವನ್ನು ಈಡೇರಿಸಬೇಕು ಎಂದು ಚಿಂತಕ ಲಿಂಗಣ್ಣ ಜಂಗಮರಹಳ್ಳಿ ಹೇಳಿದರು.ತಾಲೂಕಿನ ಯಂಜಲಗೆರೆ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಯುವಕ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಸಮಾಜದ ತಳ ಸಮುದಾಯದ ವ್ಯಕ್ತಿಗೂ ಗ್ರಾಮ ಪಂಚಾಯಿತಿಯಿಂದ ಸಂಸದ ಸ್ಥಾನದವರೆಗೆ ರಾಜಕೀಯ ಅವಕಾಶಗಳು ಸಿಗುತ್ತಿವೆ. ಇಂತಹ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಉಪನ್ಯಾಸಕ ಕೊಟ್ಟ ಶಂಕರ್ ಮಾತನಾಡಿ, ನಾವು ಶೈಕ್ಷಣಿಕವಾಗಿ ಉನ್ನತ ಪದವಿ ಪಡೆದ ನಂತರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಟೈರ್ ರಂಗನಾಥ್ ಮಾತನಾಡಿ, ಪ್ರತಿಯೊಬ್ಬ ಯುವಕರು ಅಂಬೇಡ್ಕರ್ ನಡೆದು ಬಂದ ಹಾದಿಯ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲದೆ ಅವರ ಜೀವನ ಚರಿತ್ರೆಗಳ ಪುಸ್ತಕಗಳನ್ನು ಓದುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಪೂರ್ಣ ಕುಂಭದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಡಿಎಸ್‍ಎಸ್ ಸಂಚಾಲಕ ತಿಪ್ಪೇಸ್ವಾಮಿ, ವೈ. ಕೆ. ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ರಾಕೇಶ್ ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ಗಾ. ಈರಣ್ಣ, ವೀರಸಿದ್ದಮ್ಮ, ಮಾಜಿ ಸದಸ್ಯ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ವೈ. ಕೆ. ಕೃಷ್ಣಮೂರ್ತಿ, ಪುನೀತ್ (ರಾಕ್), ವೈ .ಜಿ. ಕಾಂತರಾಜು, ನವೀನ್, ರಂಗಪ್ಪ, ಆನಂದ್ ವೈ.ಕೆ. ತಿಮ್ಮರಾಜು, ನರಸಿಂಹಯ್ಯ, ಮುಖಂಡ ಶಿವಲಿಂಗಪ್ಪ, ದೇವರಾಜು, ಪರಶುರಾಮ್, ಕೆಕೆ ಪಾಳ್ಯ ನಾಗರಾಜು, ವಿ ಎಸ್ ಎಸ್ ಎನ್ ಅಧ್ಯಕ್ಷ ತಿಮ್ಮದಾಸಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂರ್ತಿ, ಕೃಷ್ಣಪ್ಪ, ಪುಟ್ಟರಂಗಣ್ಣ ಹಾಜರಿದ್ದರು.

Share this article