ಪ್ರತಿಯೊಬ್ಬರೂ ಕನಿಷ್ಠ ಸಿಪಿಆರ್ ವಿಧಾನ ಕಲಿಯಬೇಕು: ಡಾ. ಸುಧಾಕರ್‌

KannadaprabhaNewsNetwork |  
Published : Jul 19, 2026, 03:45 AM IST
18ಕಸ್ತೂರ್ಬಾ | Kannada Prabha

ಸಾರಾಂಶ

ಮನೆಯಲ್ಲಿ ಹಠಾತ್ ಹೃದಯಸ್ತಂಭನವಾಗಿ ಕುಸಿದು ಬಿದ್ದ ವ್ಯಕ್ತಿಯೊಬ್ಬರನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಾವುದೇ ನರ ವೈಜ್ಞಾನಿಕ ಹಾನಿ ಇಲ್ಲದೆ ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಲಾಗಿದೆ.

ಮಣಿಪಾಲ: ಮನೆಯಲ್ಲಿ ಹಠಾತ್ ಹೃದಯಸ್ತಂಭನವಾಗಿ ಕುಸಿದು ಬಿದ್ದ ವ್ಯಕ್ತಿಯೊಬ್ಬರನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಾವುದೇ ನರ ವೈಜ್ಞಾನಿಕ ಹಾನಿ ಇಲ್ಲದೆ ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಲಾಗಿದೆ.

ಭಾರತದಲ್ಲಿ ಆಸ್ಪತ್ರೆಯ ಹೊರಗೆ ಸಂಭವಿಸುವ ಹೃದಯ ಸ್ತಂಭನದ ಪ್ರಕರಣಗಳಲ್ಲಿ ಶೇ. 90 ಮಂದಿಗೆ ಮರಣ ಸಂಭವಿಸುತ್ತದೆ. ಈ ಸಂದರ್ಭ ಎದೆಗೆ ಒತ್ತಡ ನೀಡುವ ವಿಧಾನ (ಸಿಪಿಆರ್) ತಿಳಿದಿರುವವರು ಭಾರತದಲ್ಲಿ ಕೇವಲ ಶೇ. 5ರಷ್ಟು ಮಂದಿ ಇರುವುದೇ ಇದಕ್ಕೆ ಕಾರಣ. ಮನೆಯಲ್ಲಿ ವ್ಯಕ್ತಿ ಕುಸಿದು ಬಿದ್ದ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆ ವೈದ್ಯರು ಆಕಸ್ಮಿಕವಾಗಿ ಅದೇ ಪರಿಸರದಲ್ಲಿದ್ದರು. ಅವರು ತಕ್ಷಣ ಸಿಪಿಆರ್ ಆರಂಭಿಸಿ, ನಿವಾಸದಲ್ಲೇ ಇಂಟ್ಯುಬೇಷನ್ ಮಾಡಿದರು. ನಂತರ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಡಿಫಿಬ್ರಿಲೇಟರ್ ಶಾಕ್ ನೀಡಿದ ಬಳಿಕ ಸುಮಾರು ಒಂದು ಗಂಟೆ ನಂತರ ಅವರ ದೇಹದಲ್ಲಿ ರಕ್ತ ಪರಿಚಲನೆ ಆರಂಭವಾಯಿತು.

ಆದರೆ ಎರಡೂ ಶ್ವಾಸಕೋಶಗಳು ಪಲ್ಮನರಿ ಎಡಿಮಾದಿಂದ ತುಂಬಿಕೊಂಡಿತ್ತು ಮತ್ತು ಹೃದಯವು ರಕ್ತ ಪರಿಚಲನೆಯನ್ನು ಸ್ವತಃ ನಿಭಾಯಿಸುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಿಗೆ ಹೃದಯ ಮತ್ತು ಶ್ವಾಸಕೋಶಗಳ ಕೆಲಸವನ್ನು ಕೃತಕವಾಗಿ ನಿಭಾಯಿಸುವ ವೀನೋ ಆರ್ಟೀರಿಯಲ್ ಎಕ್ಮೋ ವ್ಯವಸ್ಥೆಯನ್ನು ಅಳವಡಿಸಲಾಯಿತು. 36 ಗಂಟೆಗಳ ಬಳಿಕ ಅವರನ್ನು ಎಕ್ಮೋದಿಂದ ಹೊರತರಲಾಯಿತು, ಅವರಲ್ಲಿ ಯಾವುದೇ ನರವೈಜ್ಞಾನಿಕ ಹಾನಿ ಆಗದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ನಂತರ ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ ಅಳವಡಿಸಲಾಯಿತು. ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗದ ಡಾ. ಶ್ಯಾಮ್ ಕೆ. ಅಶೋಕ್, ಡಾ. ವಿಜಯ್ ಕುಮಾರ್, ಡಾ. ಸಾಯಿ, ಡಾ. ಗಣೇಶ್ ಕಾಮತ್ ಮತ್ತು ಡಾ. ಶುಭಂ ಅವರು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಪರ್ಫ್ಯೂಷನಿಸ್ಟ್ ಹರೀಶ್ ಜೊತೆಗೆ ಈ ವ್ಯಕ್ತಿಗೆ ಚಿಕಿತ್ಸೆ ನಿರ್ವಹಿಸಿದರು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು, ಸಾರ್ವಜನಿಕರು ಕನಿಷ್ಠ ಸಿಪಿಆರ್ ಮಾಡುವುದನ್ನು ಕಲಿಯಬೇಕು. ಇಲ್ಲಿ ಪಕ್ಕದಲ್ಲಿಯೇ ಇದ್ದವರು ವೈದ್ಯರಾಗಿದ್ದರು. ಆದರೆ ಮುಂದಿನ ಜೀವವನ್ನು ಉಳಿಸುವವರು ಯಾರು ಬೇಕಾದರೂ ಆಗಿರಬಹುದು ಎಂಬುದನ್ನು ಮರೆಯಬಾರದು ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ : ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ
ನೀಟ್- 2026 ಸಾಧಕರಿಗೆ ಜ್ಞಾನಸುಧಾ ಟ್ರಸ್ಟ್‌ನಿಂದ ಪ್ರೋತ್ಸಾಹಧನ ಘೋಷಣೆ