ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಮಂಡ್ಯ ಜಿಲ್ಲಾ ಶಾಖೆ, ಸರ್ಕಾರಿ ಮಹಿಳಾ ಕಾಲೇಜು, ಯುವ ರೆಡ್ಕ್ರಾಸ್ ಘಟನೆ ಇವರ ವತಿಯಿಂದ ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಮನುಷ್ಯನಿಂದ ಮಾತ್ರ ಆರೋಗ್ಯವಂತ ದೇಶ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾಯಿಲೆಗಳಿಂದಲೂ ವಿಶ್ವವನ್ನು ಒಗ್ಗೂಡಿಸಲು ಸಾಧ್ಯ ಎಂಬುದನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ತಿಳಿಸಿಕೊಟ್ಟಿದೆ ಎಂದು ಉದಾಹರಣೆ ಸಮೇತ ತಿಳಿಸಿದ ಅವರು, ಕೋವಿಡ್ ನಂತರದ ದಿನಗಳೂ ಸಹ ಹೇಗೆಲ್ಲಾ ಇರಬೇಕು ಎಂದು ಅರಿಯುವುದರೊಂದಿಗೆ ಆರೋಗ್ಯದ ಪ್ರಭಾವ ಹೇಗಿರಬೇಕು ಎಂದು ತಿಳಿಯಿತು. ಶರೀರವನ್ನು ಕೋಟೆ ರೀತಿಯಲ್ಲಿ ಬಲಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ತಾಂತ್ರಿಕತೆ ಬೆಳೆದಂತೆಲ್ಲಾ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಇದರ ಪರಿಣಾಮ ಐಷಾರಾಮಿ ಜೀವನಕ್ಕೆ ಎಲ್ಲರೂ ಮಾರು ಹೋಗಿದ್ದೇವೆ. ಅದರಲ್ಲೂ ಮೊಬೈಲ್ ಬಂದ ನಂತರ ಜೀವನ ಶೈಲಿ ಯಾವ ರೀತಿ ಬದಲಾಯಿಸಿದೆ. ಇದರಿಂದ ನಾವು ಪಾಠ ಕಲಿತು ಒಳ್ಳೆಯ ಜೀವನ ಶೈಲಿಗೆ ವಾಪಸ್ಸಾಗಬೇಕಿದೆ. ಒಳ್ಳೆಯದನ್ನು ಬಳಸುವುದು ತಪ್ಪಲ್ಲ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಬರುವುದಕ್ಕಿಂತಲೂ ಮುನ್ನ ನಾವು ಅದರಿಂದ ಒಳ್ಳೆಯ ಪಾಠವನ್ನು ಕಲಿಯುತ್ತಿದ್ದೇವೆ ಎಂದು ಎಚ್ಚರಿಸಿದರು.
ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಎಲ್ಲಾ ರೀತಿಯಲ್ಲೂ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸ್ವಚ್ಚ ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.
ಧರಣ ವೆಲ್ನೆಸ್ ಸಂಸ್ಥಾಪಕಿ ಡಾ.ಎನ್ಅಕ್ಷತಾ ಎನ್. ಮಾತನಾಡಿ, ಇಂದು ವಿಶ್ವದ ಅರ್ಧದಷ್ಟು ಜನಸಂಖ್ಯೆಯು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ, ಯುವಜನರ, ವಯಸ್ಕರ, ಗರ್ಭಿಣಿಯರ ಮತ್ತು ಹಿರಿಯರ ಆರೋಗ್ಯದ ಮೇಲೆ ಎಲ್ಲರೂ ಗಮನ ಹರಿಸುವುದು ಬಹುಮುಖ್ಯವಾಗಿದೆ ಎಂದರು.