ಮಹಿಳಾ ಕೋಲಾಟದ ಸಮಾರೋಪ
ಕ್ಷೀಣಿಸುತ್ತಿರುವ ಜನಪದ ಕಲೆಯನ್ನು ಉಳಿಸುವ ಸಲುವಾಗಿ ಎಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಹೆಚ್ಚಿನ ಸಹಕಾರ ನೀಡಬೇಕೆಂದು ಜನಪದ ಕೋಲಾಟ ಕಲಾವಿದ ಶ್ರವಣೇರಿ ನಿಂಗಪ್ಪ ಮನವಿ ಮಾಡಿದರು.
ಹೋಬಳಿಯ ಅತ್ತಿಹಳ್ಳಿ ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ಆವರಣದಲ್ಲಿ ಗ್ರಾಮದ ಶ್ರೀ ಅಮೃತಲಿಂಗೇಶ್ವರ ಮಹಿಳಾ ಕೋಲಾಟ ತಂಡದ ವತಿಯಿಂದ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ತಾಲೂಕಿನಲ್ಲಿ 30ಕ್ಕೂ ಹೆಚ್ಚು ಮಹಿಳಾ ಕೋಲಾಟ ತಂಡಗಳಿದ್ದು ತಾವು ಅನೇಕ ಮಹಿಳಾ ಕೋಲಾಟ ತಂಡಗಳಿಗೆ ಕೋಲಾಟ ಕಲಿಸಿಕೊಟ್ಟಿದ್ದೇನೆ. ತಾಲೂಕಿನ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕೋಲಾಟ ತಂಡಗಳು ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ ಇದರಿಂದ ತಾಲೂಕಿನ ಕೀರ್ತಿ ಹೆಚ್ಚಾಗಲು ಕಾರಣವಾಗಿದೆ ಕೋಲಾಟ ಕಲಿಯುವುದರಿಂದ ಉತ್ತಮ ಆರೋಗ್ಯ ಲಭಿಸುವುದರ ಜತೆಗೆ ಜನಪದ ಕಲೆಯನ್ನು ಉಳಿಸಿದಂತಾಗುತ್ತದೆ. ಗ್ರಾಮದಲ್ಲಿ ಎರಡು ಮಹಿಳಾ ಕೋಲಾಟ ತಂಡಗಳಿದ್ದು ಎರಡು ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ಹೇಳಿದರು.
ಸಮಾರೋಪ ಸಮಾರಂಭ ಅಂಗವಾಗಿ ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜ ಬೀದಿಗಳಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ ಉತ್ಸವ ನಡೆಯಿತು. ಮಹಿಳಾ ಕೋಲಾಟ ತಂಡದ ವತಿಯಿಂದ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕೋಲಾಟ ತಂಡದ ಸದಸ್ಯರಾದ ಶಕುಂತಲಾ ಮಾಲಿಂಗೇಗೌಡ, ಎಚ್.ಕೆ.ಸುಜಾತ, ಸವಿತಾ ಶ್ರೀನಿವಾಸ್, ಭಾರತಿ ಗಂಗಾಧರ ಚಾರ್, ಜಯಶೀಲ ರಾಮೇಗೌಡ, ಸವಿತಾ ಅಶೋಕ್, ಕಾವ್ಯ ಮಂಜೇಗೌಡ, ವರಲಕ್ಷ್ಮಿ ರಮೇಶ್, ರೂಪ ಲಿಂಗರಾಜು, ನಾಗರತ್ನ ಅಶೋಕ್, ಶಾರದಾ ನಂಜೇಗೌಡ, ವನಜಾಕ್ಷಿ ಕುಮಾರ್, ಸರೋಜಾ ಮರಿಸ್ವಾಮಿಗೌಡ, ಪದ್ಮ ದಿನೇಶ್, ಶಕುಂತಲಾ, ಅನಿತಾ, ದಿನೇಶ್ ಲಕ್ಕಣ್ಣಗೌಡ ಹಾಜರಿದ್ದರು.