ಡಿಸಿಎಂ ಡಿಕೆಶಿ ಜೈಲು ಸೇರೋದು ಖಚಿತ: ನಿರಾಣಿ

KannadaprabhaNewsNetwork |  
Published : Oct 21, 2023, 12:31 AM IST
ಮುರುಗೇಶ ನಿರಾಣಿ | Kannada Prabha

ಸಾರಾಂಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಪ್ರಕರಣದಲ್ಲಿ ಡಿಕೆಶಿ ನೂರಕ್ಕೆ ನೂರು ಜೈಲಿಗೆ ಹೋಗುತ್ತಾರೆ

ಕನ್ನಡಪ್ರಭ ವಾರ್ತೆ ಜಮಖಂಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಒಳಜಗಳ ಹಾವು ಮುಂಗುಸಿಯಂತಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಪ್ರಕರಣದಲ್ಲಿ ಡಿಕೆಶಿ ನೂರಕ್ಕೆ ನೂರು ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು. ತಾಲೂಕಿನ ಮೈಗೂರ-ಹಿಪ್ಪರಗಿ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ ಪೂಜಾ ಕಾರ್ಯಕ್ರಮ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಡಿಕೆಶಿ ವರ್ಚಸ್ಸನ್ನು ಕಡಿಮೆ ಮಾಡಲು ಅವರದೆ ಪಕ್ಷದ ವಿವಿಧ ಸಮಾಜದ ನಾಯಕರನ್ನು ಎತ್ತಿಕಟ್ಟುವ ಕಾರ್ಯ ನಡೆದಿದೆ. ಡಿಕೆಶಿ ಸಂಕಷ್ಟಕ್ಕೆ ಸಿಲುಕಿದರೆ ಸಿಎಂ ಸಿದ್ದರಾಮಯ್ಯ ಒಳಗೊಳಗೆ ಖುಷಿ ಪಡುತ್ತಾರೆ ಎಂದ ಅವರು, ಕಾಂಗ್ರೆಸ್ ಮುಳುಗುವ ಹಡಗು ಇದ್ದಂತೆ. ಲೋಕಸಭಾ ಚುನಾವಣಾ ನಂತರ ಏನಾಗುತ್ತೆ ಎಂಬುದನ್ನು ನೀವೇ ನೋಡ್ತಾ ಇರಿ ಎಂದು ಹೇಳಿದರು. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಬಿಟ್ಟಿ ಭಾಗ್ಯಗಳನ್ನು ತಮ್ಮ ಮನೆಯಿಂದ ದುಡ್ಡು ತಂದು ಕೊಟ್ಟಿದ್ದಾರೆಯೇ? ಜನರ ದುಡ್ಡನ್ನು ಜನರಿಗೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಕಾಂಗ್ರೆಸ್‌ನವರಿಗೆ ಕಿವಿ, ಮೂಗು, ಚರ್ಮ ದಪ್ಪವಾಗಿದೆ ಎಂದು ಟೀಕಿಸಿದರು. ಜನರಲ್ಲಿ ದುಡಿದು ತಿನ್ನುವ ಪ್ರವೃತ್ತಿ ಬೆಳೆಸಬೇಕು, ಮನೆಯಲ್ಲಿ ಕೂಡ್ರಿಸಿ ತಿನ್ನಿಸುವ ಪ್ರವೃತ್ತಿ ಸರಿಯಲ್ಲ, ವಿಶ್ವೇಶ್ವರಯ್ಯನಮಹ ಮಹಾನ್ ನಾಯಕರು ಶಿಕ್ಷಣ, ಆರೋಗ್ಯ, ನ್ಯಾಯ ಇವು ಜನರಿಗೆ ಉಚಿತವಾಗಿ ಸಿಗುವಂತಾಗಬೇಕು ಎಂದು ಹೇಳಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ರಾಜ್ಯದಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ನ್ನು ಕಟ್ಟಿಹಾಕಲು ಸಾಧ್ಯ. ನಾವು ಗೆಲ್ಲದಿದ್ದರೂ ಪರವಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲುವುದಕ್ಕೆ ಬಿಡಲ್ಲ, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಬಹಳಷ್ಟು ಅನಕೂಲ ಇದೆ ಎಂದು ಅಭಿಪ್ರಾಯಪಟ್ಟರು. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನೇ ನೇಮಿಸಿ ಎಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದೇನೆ. ಲಿಂಗಾಯತರಿಗೆ ಅಧ್ಯಕ್ಷ ಅಥವಾ ವಿರೋಧಪಕ್ಷದ ನಾಯಕ ಸ್ಥಾನ ಒಂದು ಮೀಸಲಿದೆ. ನಾನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇದೆ, ಲೋಕಸಭೆ ಚುನಾವಣೆಗೆ ನಿಲ್ಲುವ ಆಸಕ್ತಿ ಇಲ್ಲ. ಒಂದು ವೇಳೆ ನಾಯಕರು ಸೂಚಿಸಿದರೆ ನೋಡೋಣ ಎಂದಷ್ಟೆ ಪ್ರತಿಕ್ರಿಯಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ