ತುಂಗಭದ್ರಾ ಜಲಾಶಯದ ಗೇಟ್‌ ಅಳವಡಿಕೆಗೆ ಸರ್ಕಾರದಿಂದ ಅತ್ಯುತ್ತಮ ಸಹಕಾರ: ಕೇಶವ

KannadaprabhaNewsNetwork |  
Published : Apr 01, 2026, 02:15 AM IST
ಸಸಸಸ | Kannada Prabha

ಸಾರಾಂಶ

2 ಗಂಟೆಗೂ ಅಧಿಕ ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ವೀಕ್ಷಿಸಿದರು.

ಮುನಿರಾಬಾದ್: ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಾ. ಕೇಶವ ಹೇಳಿದರು.

ಮಂಗಳವಾರ ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ವೀಕ್ಷಿಸಿದ ಆನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಆಂಧ್ರಪ್ರದೇಶದ ಹಣಕಾಸು ಸಚಿವ ಪಾ. ಕೇಶವ ಹಾಗೂ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಶ್ರೀನಿವಾಸಲು ಜಂಟಿಯಾಗಿ ಸುಮಾರು 2 ಗಂಟೆಗೂ ಅಧಿಕ ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ವೀಕ್ಷಿಸಿದರು.

ತುಂಗಭದ್ರಾ ಜಲಾಶಯವು ಅಂತರ ರಾಜ್ಯ ಜಲಾಶಯವಾಗಿದ್ದು, ಜಲಾಶಯದ ನೀರನ್ನು ಕರ್ನಾಟಕ ಮತ್ತು ಆಂಧ್ರ, ತೆಲಂಗಾಣ ರಾಜ್ಯಗಳು ಹಂಚಿಕೊಳ್ಳುತ್ತದೆ. ಜಲಾಶಯದ ನೂತನ ಗೇಟ್‌ ಅಳವಡಿಕೆ ಕಾರ್ಯದಲ್ಲಿ ಕರ್ನಾಟಕ ಹಾಗೂ ಆಂಧ್ರ ಸರ್ಕಾರವು ತಮ್ಮ ಪಾಲಿನ ಹಣ ಒದಗಿಸಿದ್ದು, ಇನ್ನೂ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ತುಂಗಭದ್ರಾ ಮಂಡಳಿ ನೋಡಿಕೊಳ್ಳುತ್ತಿದೆ ಎಂದರು.

ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯದಲ್ಲಿ ತುಂಗಭದ್ರಾ ಮಂಡಳಿ ಅಧಿಕಾರಿಗಳು, ಆಂಧ್ರ ಹಾಗೂ ಕರ್ನಾಟಕ ನೀರಾವರಿ ಇಲಾಖೆ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ತುಂಗಭದ್ರಾ ಜಲಾಶಯವು ಕಳೆದ 70 ವರ್ಷಗಳಿಂದ ಆಂಧ್ರ ಹಾಗೂ ಕರ್ನಾಟಕದ ಕಡಪ, ಕರ್ನೂಲ್‌, ಅನಂತಪುರ್‌, ಬಳ್ಳಾರಿ, ಕೊಪ್ಪಳ, ರಾಯಚೂರ ಜಿಲ್ಲೆಯ ರೈತರ ಗದ್ದೆಗಳಿಗೆ ನೀರನ್ನು ಹರಿಸುವ ಮೂಲಕ ಈ ಭಾಗವನ್ನು ಸಂಪತ್ಭರಿತವನ್ನಾಗಿಸಿದೆ.

ಜಲಾಶಯದ ಗೇಟ್‌ಗಳು ಶಿಥಿಲಗೊಂಡ ಕಾರಣ ಎಲ್ಲ 33 ಗೇಟ್‌ಗಳನ್ನು ತೆರವುಗೊಳಿಸಿ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗಿದೆ. ಇದುವರೆಗೆ ಸುಮಾರು 21 ನೂತನ ಗೇಟ್‌ಗಳ ಅಳವಡಿಕೆ ಮಾಡಲಾಗಿದ್ದು, ಏಳು ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲಿದೆ. ಇನ್ನುಳಿದ ಗೇಟ್‌ ಶೀಘ್ರದಲ್ಲಿ ಅಳವಡಿಕೆ ಮಾಡಲಾಗುವುದು ಎಂದರು.

ಪ್ರಸಕ್ತ ಸಾಲಿನ ಮೇ ಅಂತ್ಯಕ್ಕೆ ಜಲಾಶಯದ ಎಲ್ಲ 33 ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗುವುದು ಹಾಗೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಮುಂಗಾರು ಬೆಳೆಗಳಿಗೆ ನೀರು ಹರಿಯುವುದು ಶತಸಿದ್ಧ ಎಂದರು.

ನೂತನ ಗೇಟ್‌ ಅಳವಡಿಕೆ ವಿಷಯದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸರ್ಕಾರಕ್ಕೆ ಸಹಕಾರ ನೀಡಿದ್ದಕ್ಕೆ ಈ ಸಂದರ್ಭದಲ್ಲಿ ರೈತರನ್ನು ಅಭಿನಂದಿಸಿದರು.

ಆಂಧ್ರಪ್ರದೇಶದ ಹಣಕಾಸು ಸಚಿವ ಪಾ. ಕೇಶವ ನೂತನ ಗೇಟ್‌ ಅಳವಡಿಸುತ್ತಿರುವ ತಂತ್ರಜ್ಞರು ಹಾಗೂ ಕಾರ್ಮಿಕರೊಂದಿಗೆ ತಾವು ಕೈಜೋಡಿಸುವ ಮೂಲಕ ಅವರನ್ನು ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ, ಅಧೀಕ್ಷಕ ಅಭಿಯಂತರ ನಾರಾಯಣ ನಾಯಕ್, ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಶಾಖಾಧಿಕಾರಿ ಕಿರಣ್, ಧರ್ಮರಾಜ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕವಡ್ಡಟ್ಟಿಯ ಗಲಾಟೆ ಮರುಕಳಿಸದಿರಲಿ: ಡಾ. ನಂದಾ ಹಣಬರಟ್ಟಿ
ಅಧಿಕಾರಿಗಳು ಆಹ್ವಾನಿಸಿಲ್ಲವೆಂದು ಪೂರ್ವಭಾವಿ ಸಭೆಗೆ ಮುಖಂಡರ ಬಹಿಷ್ಕಾರ