ಹಿರಿಯೂರು ನಗರದಲ್ಲಿ ಎಸ್ಎಸ್ಎಫ್ ಸಂಘಟನೆ ವತಿಯಿಂದ ಭಾನುವಾರ ಸೌಹಾರ್ದ ನಡಿಗೆ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹಿರಿಯೂರು
ದೇಶವು ಸರ್ವಕಾಲಕ್ಕೂ ಐಕ್ಯತೆ, ಸಮಗ್ರತೆ ಮತ್ತು ಬಲಿಷ್ಠ ಸೌಹಾರ್ದತೆಗೆ ಹೆಸರಾಗಿದ್ದು ಜಾತಿ ಧರ್ಮಗಳ ಬಗ್ಗೆ ಅತಿಯಾದ ತರಹೇವಾರಿ ಪ್ರತಿಪಾದನೆಗಳಿಂದ ಸೌಹಾರ್ದತೆಗೆ ದಕ್ಕೆ ಉಂಟಾಗುತ್ತಿದೆ ಎಂದು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಎಸ್ಎಸ್ಎಫ್ ಸಂಘಟನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸೌಹಾರ್ದ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭವ್ಯ ಭಾರತದ ನೆಲದಲ್ಲಿ ಸೌಹಾರ್ದತೆ ಕೂಡ ನೆಲೆ ನಿಂತಿದೆ. ರಾಜಕಾರಣ ಮತ್ತು ಯುವಜನರಲ್ಲಿ ಧರ್ಮಗಳ ವಿಚಾರವಾಗಿ ಬಿತ್ತುವ ಉನ್ಮಾದಗಳು ಯುವ ಸಮೂಹವನ್ನು ಉದ್ರೇಕಕ್ಕೆ ಒಳಪಡಿಸುತ್ತಿವೆ.
ಎಲ್ಲಾ ಧರ್ಮಗಳ ಗ್ರಂಥಗಳು ಮತ್ತು ಸಂವಿಧಾನವು ಶಾಂತಿ ಸಹನೆ ಸಹಬಾಳ್ವೆಯನ್ನು ಪ್ರತಿಪಾದಿಸಿವೆ ಎಂದರು. ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಸೌಹಾರ್ದತೆ ಎನ್ನುವುದು ಮನಗಳ ಮೂಲಕ ಮಿಡಿಯಬೇಕು.
ಪರಸ್ಪರ ಸಮತೆಯುಳ್ಳ ಸಾರಗಳನ್ನು ಎಲ್ಲರೂ ಗ್ರಹಿಸಬೇಕಿದೆ. ವಿಚಾರಗಳ ತಿಳುವಳಿಕೆ, ತಾಳ್ಮೆಯ ಅಲೋಚನೆಗಳು ಸೌಹಾರ್ದ ಮನಗಳನ್ನು ಕಟ್ಟಲಿವೆ ಎಂದರು.
ಎಸ್ಎಸ್ಎಫ್ ರಾಜ್ಯ ಸಂಘಟನೆ ಅಧ್ಯಕ್ಷ ಮೌಲಾನ ಸೂಫಿಯಾನ್ ಸಖಾಫಿ ಮಾತನಾಡಿ, ದೇಶದಲ್ಲಿ ಬಾಂಧವ್ಯದ ಬೆಸುಗೆಗಳು ಗಟ್ಟಿಗೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿ ಇರುವಂತೆ ಭಾರತದ ಪ್ರಜೆಗಳಾದ ನಾವು ನಮ್ಮ ಬದುಕುಗಳನ್ನು ಜಾತ್ಯಾತೀತವಾಗಿ ಹಾಗೂ ಮನಸ್ಸುಗಳನ್ನು ಪೋಣಿಸುವಂತೆ ಬದುಕಬೇಕಿದೆ. ಸೌಹಾರ್ದ ನಡಿಗೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಆ ಮೂಲಕ ಸೌಹಾರ್ದವಾಗಿ ಮುನ್ನಡೆಯಬೇಕಾದ ಆಶಾವಾದವನ್ನು ಬಿತ್ತುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಹಾಫೀಜ್ ಸಿಗ್ಬತ್ ಉಲ್ಲಾ, ಅಬ್ದುಲ್ಲಾ ಮೌಲಾನ ಜಾಫರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತ, ಪಿ.ಎಸ್ ಸಾದತ್ ಉಲ್ಲಾ,ಮೌಲಾನ ಸಲ್ಮಾನ್, ಮುನೀರ್ ಮುಲ್ಲಾ, ಚಮನ್ ಷರೀಫ್, ಅಬ್ದುಲ್ ಅಜೀಜ್, ನಗರಸಭೆ ಸದಸ್ಯರಾದ ಬಾಲಕೃಷ್ಣ, ಶಿವಕುಮಾರ್, ಮಾರುತಿರಾವ್, ಜಿ.ದಾದಾಪೀರ್, ರಫೀಕ್ ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.