ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರಿ ನಿವೃತ್ತ ನೌಕರರ ಸಂಘ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿರಿಯರು ಅತ್ಯಂತ ಸಂತಸದಿಂದ ಇರಬೇಕಾದ ದಿನವಾಗಿದೆ. ಮಕ್ಕಳಿಗೆ ಪೋಷಣೆ ಮಾಡಿ ವಿದ್ಯೆ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸಿ ಪರಿಪೂರ್ಣ ಜೀವನವನ್ನು ನಡೆಸಿದ್ದಾರೆ. ನಮ್ಮ ಹಿರಿಯರು ನಮಗೆ ತೋರಿಸಿದ ದಾರಿಯಲ್ಲಿ ಇಂದು ನಾವು ಬದುಕನ್ನು ಸಾಗಿಸುತ್ತಿದ್ದು, ಅವರನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಇಂದು ಪ್ರತಿ ಕುಟುಂಬವು ಕೂಡ ತಮ್ಮ ಹಿರಿಯರೊಂದಿಗೆ ಈ ದಿನವನ್ನು ಆಚರಿಸಬೇಕು. ಆದರೆ ಮಕ್ಕಳಿಗೆ ತಂದೆ-ತಾಯಿ ಅವರಿಗೆ ಸಮಯ ಕೊಡುವಷ್ಟು ಬಿಡುವಿಲ್ಲ ಎಂದ ಅವರು, ಸರ್ಕಾರ ಅನೇಕ ಯೋಜನೆಗಳನ್ನು ಹಿರಿಯ ನಾಗರಿಕರ ರಕ್ಷಣೆಗೆ ಜಾರಿಗೆ ತಂದಿದೆ. ಸಂಕಷ್ಟದಲ್ಲಿ ಇರುವ ಹಿರಿಯರು ದೂರವಾಣಿ ಕರೆ ಮೂಲಕ ಅಥವಾ ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ವಯೋಶ್ರಿ ಯೋಜನೆಯಡಿ ಇಂದು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸುಮಾರು 50 ಲಕ್ಷ ರು. ಮೌಲ್ಯದ ಸಾಧನ ಸಲಕರಣೆಗಳನ್ನು ಅಲಿಂಕೋ ಸಂಸ್ಥೆ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ. ನಿಜವಾಗಿ ಅವಶ್ಯಕತೆ ಇರುವವರು ಮಾತ್ರ ಸಾಧನಾ ಸಲಕರಣೆಗಳನ್ನು ಬಳಸಿರಿ. ಒಂದು ಬಾರಿ ವೀಲ್ ಚೇರ್ ಸ್ಟಿಕ್ಗಳಿಗೆ ಹೊಂದಿಕೊಂಡರೆ ಸಾಯುವವರೆಗೂ ಅದರ ಸಹಾಯ ಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿರೇಖಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಅಲಿಂಕೊ ಸಂಸ್ಥೆ ವ್ಯವಸ್ಥಾಪಕ ಶಿವಕುಮಾರ ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.