ಕನ್ನಡಪ್ರಭ ವಾರ್ತೆ ಕಾರ್ಕಳಮನುಷ್ಯ ಜನ್ಮದ ಶ್ರೇಷ್ಠತೆಯನ್ನು ವಿಜ್ಞಾನದ ವಿವರಣೆಯೊಂದಿಗೆ ಕರಾರುವಕ್ಕಾಗಿ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಅಲ್ಲಿರುವ ವಿವರಣೆಗಳು ವೈಜ್ಞಾನಿಕವಾಗಿಯೂ ಸತ್ಯ ಎಂಬುದು ಸಾಬೀತಾಗಿದೆ ಎಂದು ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕ ಪ್ರೊ.ರಾಮಚಂದ್ರ ಜಿ. ಭಟ್ ಹೇಳಿದರು.
ವೇದ ಮೂಲವಾಗಿ ೧೦೮ ಉಪನಿಷತ್ತುಗಳಿದ್ದರೂ ಅದರಲ್ಲಿ ವೇದಮಂಥನದಿಂದ ರೂಪತಾಳಿದ ದಶ ಉಪನಿಷತ್ತುಗಳು ಮುಖ್ಯವಾಗಿರುವಂಥದ್ದು. ಉಪನಿಷತ್ಗಳಲ್ಲಿ ವಿದ್ಯೆಯ ಬಗ್ಗೆ ವಿಶೇಷ ಉಲ್ಲೇಖವಿದ್ದು, ಇಂತಹ ಉಪನಿಷತ್ಗಳು ಇಂದು ಪ್ರವಚನಕ್ಕಷ್ಟೇ ಸೀಮಿತವಾಗಿದೆ. ಶಿಕ್ಷಣದಲ್ಲಿಯೂ ಇದು ಸೇರ್ಪಡೆಗೊಂಡು ಎಲ್ಲರೂ ಇದನ್ನು ಅಧ್ಯಯನ ನಡೆಸಿ ತಮ್ಮ ಜೀವನವನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ತಿಳಿಸಿದರು.
ಇದೇ ಸಂದರ್ಭ ಡಾ.ಬಿ.ಭಾಸ್ಕರ ರಾವ್ ಅವರ ‘ಮನುಸ್ಮೃತಿ-ಒಂದು ವಿಶೇಷ ಕೃತಿ’ ಅನ್ನುವ ಪುಸ್ತಕವನ್ನು ಪ್ರೊ. ರಾಮಚಂದ್ರ ಜಿ. ಭಟ್ ಲೋಕಾರ್ಪಣೆಗೊಳಿಸಿದರು. ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಮತ್ತು ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಿತ್ರಪ್ರಭಾ ಹೆಗ್ಡೆ ವಂದಿಸಿದರು.