ಕನ್ನಡಪ್ರಭ ವಾರ್ತೆ ಟಿ.ನರಸೀಪುರಕಣ್ಣು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ, ಅದರ ಸುರಕ್ಷತೆ ಅತಿ ಅಗತ್ಯವಾಗಿದ್ದು, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಹೇಳಿದರು.
ಮನುಷ್ಯನ ಅಂಗಗಳಲ್ಲಿ ನೇತ್ರಗಳೂ ಸಹ ಅತ್ಯಂತ ಪ್ರಮುಖ ಅಂಗ, ಸಮರ್ಪವಾಗಿ ಹಾಗೂ ಸಮರ್ಥವಾಗಿ ಜೀವನ ನಡೆಸಲು ದೃಷ್ಟಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಸಮೃದ್ಧ ಜೀವನಕ್ಕೆ ಸಮೃದ್ಧ ಆರೋಗ್ಯವೇ ಮುಖ್ಯವಾಗುತ್ತದೆ. ಈಗಿನ ಆಹಾರ ಬೆಳೆಗಳು, ಆಹಾರ ಪದ್ಧತಿಗಳು ರಾಸಾಯನಿಕ ಯುಕ್ತವಾಗಿರುವುದು ಕಣ್ಣಿನ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತವೆ ಎಂದರು.
ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯಕ ಎಂದರು.ಶಿಬಿರದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಪಾಸಣೆಗೆ ಒಳಗಾದರು. ವೈದ್ಯರಾದ ಡಾ. ಪ್ರಕ್ಯ, ಡಾ .ಪೂಜಾ, ಸಹಾಯಕರಾದ ಪ್ರಜ್ವಲ್, ಅಂಜಲಿ, ಅಪರ್ಣ ತಪಾಸಣೆ ಕಾರ್ಯದಲ್ಲಿ ಭಾಗವಹಿಸಿದ್ದರು.